ಸೇತುವೆ ಮೇಲಿಂದ ಪ್ರಪಾತಕ್ಕೆ ಬಿದ್ದ ಕಾರು:
ಬಿಜೆಪಿ ಶಾಸಕನ ಪುತ್ರ ಸೇರಿ 7 ಮಂದಿ ಮೃತ್ಯು
ವಾರ್ಧಾ: ಸೇತುವೆ ಮೇಲಿಂದ ಪ್ರಪಾತಕ್ಕೆ ಕಾರು ಬಿದ್ದು 7 ಮೆಡಿಕಲ್ ವಿದ್ಯಾರ್ಥಿಗಳು ದುರಂತ ಅಂತ್ಯ ಕಂಡಿದ್ದಾರೆ. ಮೃತರ ಪೈಕಿ ಒಬ್ಬ ಯುವಕ ಬಿಜೆಪಿ ಶಾಸಕರೊಬ್ಬರ ಪುತ್ರ.
ಸೋಮವಾರ ತಡರಾತ್ರಿ ಮಹಾರಾಷ್ಟ್ರದ ವಾರ್ಧಾ ಜಿಲ್ಲೆಯ ವಾರ್ಧಾ-ಯವತ್ಮಾಲ್ ಹೆದ್ದಾರಿಯ ಸೆಲ್ಸುರಾ ಬಳಿ ಈ ಭೀಕರ ಅಪಘಾತ ನಡೆದಿದೆ.
ತಿರೋಡಾ ಕ್ಷೇತ್ರದ ಬಿಜೆಪಿ ಶಾಸಕ ವಿಜಯ್ ರಹಂಗ್ಡೇಲ್ ಅವರ ಪುತ್ರ ಆವಿಷ್ಕರ್ ಮತ್ತು ಈತನ ಸ್ನೇಹಿತರಾದ ನೀರಜ್ ಚೌಹಾನ್, ನಿತೇಶ್ ಸಿಂಗ್, ವಿವೇಕ್ ನಂದನ್, ಪ್ರತ್ಯೂಷ್ ಸಿಂಗ್, ಶುಭಂ ಜೈಸ್ವಾಲ್, ಪವನ್ ಶಕ್ತಿ ಮೃತರು. ಇವರೆಲ್ಲರೂ ಸಾವಂಗಿಯ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು. 7 ಮಂದಿಯೂ ಸೋಮವಾರ ರಾತ್ರಿ ದಿಯೋಲಿಯಿಂದ ವಾರ್ಧಾ ಕಡೆಗೆ ಕ್ಸೈಲೋ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಕಾರು ಸೇತುವೆ ಮೇಲಿಂದ 50 ಅಡಿ ಆಳಕ್ಕೆ ಬಿದ್ದಿದೆ. ಕಾರಿನಲ್ಲಿದ್ದ 7 ಮಂದಿಯೂ ಸ್ಥಳದಲ್ಲೇ ದುರಂತ ಅಂತ್ಯ ಕಂಡಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಪೊಲೀಸರು ಮೃತದೇಹಗಳನ್ನು ಮೇಲಕ್ಕೆ ಎತ್ತಿ ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.




