ಮಹಿಳೆಯ ಕೊಲೆ ಪ್ರಕರಣ:
ಬಿಜೆಪಿ ಪುರಸಭೆ ಸದಸ್ಯನ ಬಂಧನ
ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದಲ್ಲಿ ನಡೆದಿದ್ದ ಮಹಿಳೆಯ ಶೂಟೌಟ್ ಪ್ರಕರಣವನ್ನು ಸಂಕೇಶ್ವರ ಪೊಲೀಸರು ಭೇದಿಸಿದ್ದು, ಶೂಟೌಟ್ ನಡೆಸಿ ಮಹಿಳೆಯನ್ನು ಕೊಲೆ ಮಾಡಿದ್ದ ಬಿಜೆಪಿ ಪುರಸಭೆ ಸದಸ್ಯನನ್ನು ಪೊಲೀಸರು ಬಂಧಿಸಿದ್ದಾರೆ.
ಬಿಜೆಪಿ ಪುರಸಭೆ ಸದಸ್ಯ ಉಮೇಶ್ ಕಾಂಬಳೆ ಎಂಬಾತನನ್ನು ಸಂಕೇಶ್ವರ ಪೊಲೀಸರು ಬಂಧಿಸಿದ್ದಾರೆ. ಕಳೆದ ಜ.16ರಂದು ನಾಡ ಪಿಸ್ತೂಲ್ನಿಂದ ಶೈಲಜಾ ಅಲಿಯಾಸ್ ಗೌರವ್ವ ಸುಭೇದಾರ್(56) ಮಹಿಳೆಯ ಎದೆಗೆ ಹಾಗೂ ಕೈಗೆ ಗುಂಡಿಕ್ಕಿ ಕೊಲೆ ಮಾಡಲಾಗಿತ್ತು.
ಪ್ರಕರಣದ ಬೆನ್ನತ್ತಿದ್ದ ಸಂಕೇಶ್ವರ ಪಿಎಸ್ಐ ಗಣಪತಿ ಕೊಂಗನೊಳ್ಳಿ ಹಾಗೂ ಸಿಪಿಐ ರಮೇಶ್ ಛಾಯಾಗೋಳ, ಹವಾಲ್ದಾರ್ ಭೀಮಪ್ಪ ನಾಗನೂರೆ, ಬಸವರಾಜ ಕಪರಟ್ಟಿ ಅವರ ತಂಡ ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.




