ರಾಹುಲ್ ಗಾಂಧಿ ಸದ್ದಾಂ ಹುಸೇನ್ ಅವರಂತೆ ಕಾಣುತ್ತಿದ್ದಾರೆ: ಅಸ್ಸಾಂ ಮುಖ್ಯಮಂತ್ರಿ
ಅಹಮದಾಬಾದ್: ಇತ್ತೀಚೆಗೆ ರಾಹುಲ್ ಗಾಂಧಿ ಸದ್ದಾಂ ಹುಸೇನ್ ಅವರಂತೆ ಕಾಣುತ್ತಿದ್ದಾರೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ವ್ಯಂಗ್ಯವಾಡಿದ್ದಾರೆ.
ಗುಜರಾತ್ನಲ್ಲಿ ಮುಂದಿನ ತಿಂಗಳು ನಡೆಯಲಿರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಹಮದಾಬಾದ್ನಲ್ಲಿ ಬಿಜೆಪಿ ಅಭ್ಯರ್ಥಿ ಪರ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಭಾರತ್ ಜೋಡೊ ಯಾತ್ರೆ ಕೈಗೊಂಡಿರುವ ರಾಹುಲ್ ಗಾಂಧಿ ಅವರ ವಿರುದ್ಧ ವಾಗ್ದಾಳಿ ನಡೆಸಿರುವ ಬಿಸ್ವ, ಚುನಾವಣೆಯಲ್ಲಿ ಸೋಲಿನ ಭಯದಿಂದಾಗಿ ಕಾಂಗ್ರೆಸ್ ನಾಯಕ ಗುಜರಾತ್ಗೆ ಬರುತ್ತಿಲ್ಲ ಎಂದು ಹೇಳಿದರು.
ಗುಜರಾತ್ನಲ್ಲಿ ರಾಹುಲ್ ಪತ್ತೆಯಿಲ್ಲ. ಸಂದರ್ಶಕ ಅಧ್ಯಾಪಕರಂತೆ ರಾಜ್ಯಕ್ಕೆ ಬರುತ್ತಾರೆ. ಹಿಮಾಚಲ ಪ್ರದೇಶದಲ್ಲೂ ಪ್ರಚಾರ ಮಾಡಿಲ್ಲ. ಚುನಾವಣೆ ನಡೆಯದ ರಾಜ್ಯಗಳಿಗೆ ಮಾತ್ರ ಭೇಟಿ ಕೊಡುತ್ತಾರೆ. ಬಹುಶಃ ಸೋಲಿನ ಭಯ ಕಾಡುತ್ತಿರಬಹುದು ಎಂದು ಹೇಳಿದರು.
ಭಾರತ್ ಜೋಡೊ ಯಾತ್ರೆಯಲ್ಲಿ ನಟಿ ಪೂಜಾ ಭಟ್ ಹಾಗೂ ಅಮೋಲ್ ಪಾಲೇಕರ್ ಪಾಲ್ಗೊಂಡಿದ್ದರ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಕಾಂಗ್ರೆಸ್ ದುಡ್ಡು ಕೊಟ್ಟಿರಬಹುದು ಎಂದು ಆರೋಪಿಸಿದರು.




