ಶಿವಮೊಗ್ಗ: ದೀಪಾವಳಿ ಹಬ್ಬಕ್ಕೂ ಮುಂದುವರೆದ ಹಲಾಲ್ ಕಟ್ ಅಭಿಯಾನ: ಸರ್ಟಿಫೈಡ್ ಇರುವ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಹಿಂದೂ ಸಂಘಟನೆಗಳು ಕರೆ
ಯುಗಾದಿ ಸಂದರ್ಭದಲ್ಲಿ ಆರಂಭವಾಗಿದ್ದ ಹಲಾಲ್ ಕಟ್ ಅಭಿಯಾನ ಇದೀಗ ದೀಪಾವಳಿ ಹಬ್ಬಕ್ಕೂ ಮುಂದುವರಿದಿದೆ. ಈ ಹಿನ್ನೆಲೆಯಲ್ಲಿ ದೀಪಾವಳಿ ಹಬ್ಬಕ್ಕೆ ಹಲಾಲ್ ಸರ್ಟಿಫೈಡ್ ಇರುವ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಹಿಂದೂ ಸಂಘಟನೆಗಳು ಕರೆ ನೀಡಿವೆ.
ಹಿಂದೂ ಸಂಘಟನೆಯ ಕರೆಯ ನಿಟ್ಟಿನಲ್ಲಿ ಶಿವಮೊಗ್ಗದಲ್ಲಿ ಅ.18ರಂದು ಹಿಂದೂ ಜನ ಜಾಗೃತಿ ಸಮಿತಿ ಹಲಾಲ್ ಕಟ್ ಅಭಿಯಾನ ಆರಂಭಿಸಿದೆ.
ಜಿಲ್ಲಾಧಿಕಾರಿ ಕಚೇರಿ ಸಮ್ಮುಖದಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಿದ ಹಿಂದೂ ಜನ ಜಾಗೃತಿ ಸಮಿತಿ, ದೀಪಾವಳಿಗೆ ಹಲಾಲ್ ಸರ್ಟಿಫೈಡ್ ವಸ್ತುಗಳನ್ನು ಬಳಸಲು ಅನುಮತಿ ನೀಡಬಾರದು ಎಂದು ಮನವಿ ಮಾಡಿಕೊಂಡಿರುವುದಾಗಿ ವರದಿ ತಿಳಿಸಿದೆ.

ಬೆಂಗಳೂರಿನಲ್ಲಿ ಸಭೆ ನಡೆಸಿದ್ದ ಹಿಂದೂ ಸಂಘಟನೆಗಳು, ಇಂದಿನಿಂದ ಪ್ರತಿ ಜಿಲ್ಲೆಯಲ್ಲಿ ಅಭಿಯಾನ ನಡೆಸುವಂತೆ ಕರೆ ಕೊಟ್ಟಿದ್ದವು. ಹಲಾಲ್ ಸರ್ಟಿಫೈಡ್ ಇರುವ ಉತ್ಪನ್ನಗಳನ್ನು ಖರೀದಿಸದಂತೆ ಜನರಲ್ಲಿ ಜಾಗೃತಿ ಮೂಡಿಸಲು ಹಿಂದೂ ಜನ ಜಾಗೃತಿ ವೇದಿಕೆ ಮುಂದಾಗಿದೆ.
ಹಿಂದೂಗಳು ಹಲಾಲ್ ಸರ್ಟಿಫೈಡ್ ನ ಯಾವ ವಸ್ತುಗಳನ್ನೂ (ಮಾಂಸ, ಸೌಂದರ್ಯ ವರ್ಧಕ ವಸ್ತು, ಧಾನ್ಯ, ಹಣ್ಣು, ಔಷಧ) ದೀಪಾವಳಿ ಸಂದರ್ಭದಲ್ಲಿ ಬಳಕೆ ಮಾಡಬಾರದು ಎಂದು ಹಿಂದೂ ಜನಜಾಗೃತಿಯ ಮುಖಂಡರು ಮನವಿ ಮಾಡಿಕೊಂಡಿರುವುದಾಗಿ ವರದಿಯಾಗಿದೆ.




