May 14, 2026

ರೈತ ವಿರೋಧಿ ಕಾನೂನು ಪ್ರತಿಭಟನಾ ಸ್ಥಳದಲ್ಲಿ ಹಾಕಿದ್ದ ಬ್ಯಾರಿಕೇಡ್ ಗಳನ್ನು ತೆರವುಗೊಳಿಸಿದ ಪೊಲೀಸರು

0
7ea91b92-387c-11ec-b290-06f03fee1552_1635486950398.jpeg

ನವದೆಹಲಿ: ದೆಹಲಿ-ಉತ್ತರ ಪ್ರದೇಶ ಗಡಿಯಲ್ಲಿರುವ ಗಾಜಿಪುರದಲ್ಲಿ ರೈತ ವಿರೋಧಿ ಕಾನೂನು ಪ್ರತಿಭಟನಾ ಸ್ಥಳದಲ್ಲಿ ಹಾಕಿದ್ದ ಬ್ಯಾರಿಕೇಡ್ ಗಳು ಮತ್ತು ಕನ್ಸರ್ಟಿನಾ ವೈರ್ ಗಳನ್ನು ದೆಹಲಿ ಪೊಲೀಸರು ಇಂದು ತೆಗೆದುಹಾಕಲು ಮುಂದಾಗಿದ್ದಾರೆ.

ಕಳೆದ ವರ್ಷ ಕಬ್ಬಿಣ ಮತ್ತು ಸಿಮೆಂಟ್ ಬಳಕೆ ಮಾಡಿ ಬ್ಯಾರಿಕೇಡ್ ಗಳನ್ನು ನಿರ್ಮಾಣ ಮಾಡಲಾಗಿತ್ತು. ಕನಿಷ್ಠ ಐದು ಪದರಗಳ ಕನ್ಸರ್ಟಿನಾ ತಂತಿಗಳನ್ನು ಹಾಕಲಾಗಿತ್ತು.

ಪೊಲೀಸ್ ಉಪ ಕಮಿಷನರ್ (ಪೂರ್ವ) ಪ್ರಿಯಾಂಕಾ ಕಶ್ಯಪ್ ಈ ಸಂಬಂಧ ಪ್ರತಿಕ್ರಿಯಿಸಿ, NH-9 ನಲ್ಲಿ ಬ್ಯಾರಿಕೇಡ್ ಗಳನ್ನು ತೆಗೆದುಹಾಕುವ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ. ವಾಹನ ಸಂಚಾರ ಸುಗಮಗೊಳಿಸಲು ತಾತ್ಕಾಲಿಕವಾಗಿ ಬ್ಯಾರಿಕೇಡ್ ಗಳನ್ನು ತೆಗೆಯಲಾಗುತ್ತಿದೆ. ಹಾಗೆ ರಾಷ್ಟ್ರೀಯ ಹೆದ್ದಾರಿ 24 ಅನ್ನು ಈಗಾಗಲೇ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.

ರಸ್ತೆ ಮುಕ್ತ ಮಾಡುವುದರಿಂದ ಗಾಜಿಯಾಬಾದ್, ದೆಹಲಿ, ನೋಯ್ಡಾದ ಸಾವಿರಾರು ಪ್ರಯಾಣಿಕರಿಗೆ ಮತ್ತು ರಾಷ್ಟ್ರ ರಾಜಧಾನಿ ಮತ್ತು ಉತ್ತರ ಪ್ರದೇಶದ ಒಳಭಾಗಗಳ ನಡುವೆ ಮೀರತ್ ಮತ್ತು ಅದರಾಚೆಗೆ ಪ್ರಯಾಣಿಸುವವರಿಗೆ ಸಹಾಯವಾಗಲಿದೆ.

ರಸ್ತೆಗಳನ್ನು ಮುಕ್ತಗೊಳಿಸುವಂತೆ ಅಕ್ಟೋಬರ್ 21 ರ ಸುಪ್ರೀಂ ಕೋರ್ಟ್ ನಿರ್ದೇಶನದ ನಂತರ ಬ್ಯಾರಿಕೇಡ್ ಗಳನ್ನು ತೆಗೆದುಹಾಕಲಾಗುತ್ತಿದೆ.

ಕಳೆದ ವರ್ಷ ಜಾರಿಗೆ ತಂದ ಮೂರು ಕಾನೂನುಗಳು ತಮ್ಮ ಹಿತಾಸಕ್ತಿಗೆ ವಿರುದ್ಧವಾಗಿವೆ ಎಂದು ಪ್ರತಿಭಟನಾನಿರತ ರೈತರು ಹೋರಾಡುತ್ತಲೇ ಬರುತ್ತಿದ್ದಾರೆ. ಇದರ ನಡುವೆ ಕೇಂದ್ರವು ಈ ಕಾನೂನುಗಳು ರೈತ ಪರ ಎಂದು ಹೇಳುತ್ತಿದೆ.

Leave a Reply

Your email address will not be published. Required fields are marked *

error: Content is protected !!