ಪುತ್ತೂರು: ಭಾರೀ ಮಳೆಗಾಳಿಗೆ ಇತ್ತೀಚೆಗೆ ಉದ್ಘಾಟನೆಗೊಂಡಿದ್ದ ರಾಜ್ಯದ ಮೂರನೇ ಅತಿ ಎತ್ತರದ ರಾಷ್ಟ್ರಧ್ವಜ ಭೂಸ್ಪರ್ಶ
ಪುತ್ತೂರು: ಸೋಮವಾರ ಸುರಿದ ಗಾಳಿ ಮಳೆಯ ಆರ್ಭಟಕ್ಕೆ ನೆಲ್ಲಿಕಟ್ಟೆ ಉದ್ಯಾನವನದಲ್ಲಿ ಹಾರಾಡುತ್ತಿದ್ದ ರಾಜ್ಯದ ಮೂರನೇ ಅತಿ ಎತ್ತರದ ರಾಷ್ಟ್ರಧ್ವಜ ಭೂಸ್ಪರ್ಶಗೊಂಡ ಘಟನೆ ನಡೆದಿದೆ.
ತೀವ್ರ ಗಾಳಿಯಿಂದ ಧ್ವಜದ ದಾರ ಕಡಿದು, ಧ್ವಜವು ಸಮೀಪದ ವಿದ್ಯುತ್ ತಂತಿಗೆ ತಗುಲಿದ ಪರಿಣಾಮ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಕೆಲಕಾಲ ವಿದ್ಯುತ್ ವ್ಯತ್ಯಯ ಉಂಟಾಯಿತು. ಬಳಿಕ ಸಂಬಂಧಿತ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ರಾಷ್ಟ್ರಧ್ವಜವನ್ನು ಗೌರವಪೂರ್ವಕವಾಗಿ ತಂತಿಯಿಂದ ತೆರವುಗೊಳಿಸಿ ಸುರಕ್ಷಿತವಾಗಿ ಸ್ಥಳಾಂತರಿಸಿದರು.
ಫೆ.17ರಂದು ಉದ್ಘಾಟನೆಗೊಂಡ ಈ ಧ್ವಜಸ್ತಂಭವು ತಾಲೂಕು ಕೇಂದ್ರಗಳಲ್ಲಿ ಪ್ರಥಮವಾಗಿದ್ದು, ರಾಜ್ಯದ ಮೂರನೇ ಅತಿ ಎತ್ತರದ ಧ್ವಜಸ್ತಂಭ ಎಂಬ ವಿಶೇಷತೆ ಹೊಂದಿದೆ. ಗಾಳಿ ಮಳೆಯ ಪರಿಣಾಮ ಧ್ವಜಸ್ತಂಭವು ಸ್ವಲ್ಪ ವಾಲಿರುವುದಾಗಿ ತಿಳಿದು ಬಂದಿದೆ.




