ಪುಂಜಾಲಕಟ್ಟೆ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ಹೆಣ್ಣುಮಕ್ಕಳ ದಿನ ಆಚರಣೆ
ಪುಂಜಾಲಕಟ್ಟೆ: ಸರಕಾರಿ ಪ್ರಥಮದರ್ಜೆ ಕಾಲೇಜು ಪುಂಜಾಲಕಟ್ಟೆ ಇದರ ಆಶ್ರಯದಲ್ಲಿ ಆಂತರಿಕ ಗುಣಮಟ್ಟ ಭರವಸೆ ಕೋಶ ಮತ್ತು ರೋವರ್ಸ್ ಮತ್ತು ರೇಂಜರ್ಸ್ ಘಟಕದ ವತಿಯಿಂದ ‘ರಾಷ್ಟ್ರೀಯ ಹೆಣ್ಣುಮಕ್ಕಳ ದಿನ’ ವನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಅಡ್ವಕೇಟ್ ಜುಬೇದಾ ಸರಳಿಕಟ್ಟೆಯವರು ಮಾತನಾಡಿ, ಸಮಾಜದಲ್ಲಿ ಹೆಣ್ಣಿನ ಪಾತ್ರವೇನು, ಹೆಣ್ಣನ್ನು ಹೇಗೆ ನೋಡಿಕೊಳ್ಳಲಾಗುತ್ತಿದೆ, ದೌರ್ಜನ್ಯಗಳ ವಿರುದ್ಧ ಕಾನೂನಾತ್ಮಕವಾಗಿ ಯಾವೆಲ್ಲ ದಾರಿಗಳಿವೆ, ಯಾವ ರೀತಿ ಹೆಣ್ಣು ತನ್ನ ಆತ್ಮ ರಕ್ಷಣೆಯನ್ನು ಮಾಡಿಕೊಳ್ಳಬಹುದು ಎಂಬ ವಿಚಾರವಾಗಿ ಕಾನೂನಿನ ಮಾಹಿತಿಗಳನ್ನು ಹಂಚಿಕೊಂಡರು. ಕಾಲೇಜಿನ ರೋವರ್ಸ್ ಘಟಕದ ಸಂಚಾಲಕರಾದ ಪ್ರೊ. ಆಂಜನೇಯ ಎಂ.ಎನ್ ಅವರು ಇತಿಹಾಸದಲ್ಲಿ ಅಜರಾಮರರಾದ ವೀರವನಿತೆಯರ ಆದರ್ಶಗಳ ಬಗೆಗೆ ಪ್ರಾಸ್ತಾವಿಕ ಮಾತುಗಳನ್ನಾಡಿದರು.
‘ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೇ ತತ್ರ ದೇವತಾಃ’ ಎಂಬ ಮಾತಿನಂತೆ ದೇಶದ ಸರ್ವತೋಮುಖ ಅಭಿವೃದ್ಧಿಗೆ ಹೆಣ್ಣುಮಕ್ಕಳ ರಕ್ಷಣೆ ಅತ್ಯಗತ್ಯ ಎಂದು ಸಭಾಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ರವಿಶಂಕರ್ ಬಿ. ಅಧ್ಯಕ್ಷೀಯ ನುಡಿಗಳನ್ನಾಡಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ರೇಂಜರ್ಸ್ ಘಟಕದ ಸಂಚಾಲಕರಾದ ಪ್ರೊ. ಪ್ರೀತಿ ಕೆ. ರಾವ್, IQAC ಘಟಕದ ಸಂಚಾಲಕರಾದ ಡಾ. ಲೋಕೇಶ್, ಕಾಲೇಜಿನ ಗ್ರಂಥಪಾಲಕರಾದ ಪ್ರೊ. ಖಂಡೋಜಿ ಲಮಾಣಿ, ಸಹಾಯಕ ಪ್ರಾಧ್ಯಾಪಕರಾದ ಪ್ರೊ.ದೀಕ್ಷಿತಾ ವರ್ಕಾಡಿ ಹಾಗೂ ಎಲ್ಲಾ ರೋವರ್ಸ್ ಮತ್ತು ರೇಂಜರ್ಸ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ರೇಂಜರ್ ತೃಪ್ತಿ ಸ್ವಾಗತಿಸಿ ರೇಂಜರ್ ನೀಶ್ಮ ಧನ್ಯವಾದವಿತ್ತರು. ರೇಂಜರ್ ಅನನ್ಯ ಕಾರ್ಯಕ್ರಮ ನಿರೂಪಿಸಿದರು.




