ಅರವಿಂದ್ ಕೇಜ್ರಿವಾಲ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಪಂಜಾಬ್ ಮುಖ್ಯಮಂತ್ರಿ ನಿರ್ಧಾರ
ಚಂಡೀಗಢ: ಆಮ್ ಆದ್ಮಿ ಪಕ್ಷದ ಸಂಚಾಲಕ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುವುದಾಗಿ ಪಂಜಾಬ್ ಮುಖ್ಯಮಂತ್ರಿ ಚರಣ್ ಜಿತ್ ಸಿಂಗ್ ಚನ್ನಿ ಅವರು ಹೇಳಿದ್ದಾರೆ.
ಪಂಜಾಬ್ ಸಿಎಂ ಸಂಬಂಧಿಯ ಮನೆ ಮೇಲೆ ಅಕ್ರಮ ಮರಳು ದಂಧೆ ಪ್ರಕರಣ ಕುರಿತು ಇಡಿ ಅಧಿಕಾರಿಗಳು ಪಂಜಾಬ್ನ ಹಲವು ಸ್ಥಳಗಳ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಕೇಜ್ರಿವಾಲ್, ಚರಣ್ ಜಿತ್ ಸಿಂಗ್ ಚನ್ನಿ ಅಪ್ರಾಮಾಣಿಕ ವ್ಯಕ್ತಿ ಎಂದು ಟೀಕೆ ಮಾಡಿದ್ದರು.
ಕೇಜ್ರಿವಾಲ್ ಅವರು ಇತರರ ಗೌರವಕ್ಕೆ ಚ್ಯುತಿ ತರುವ ರೀತಿಯಲ್ಲಿ ಆರೋಪಗಳನ್ನು ಮಾಡುವ ಅಭ್ಯಾಸವನ್ನು ಹೊಂದಿದ್ದಾರೆ. ಇದೇ ಕಾರಣಕ್ಕಾಗಿ ಈ ಹಿಂದೆ ಬಿಜೆಪಿ ನಾಯಕರಾದ ನಿತಿನ್ ಗಡ್ಕರಿ, ದಿವಂಗತ ಅರುಣ್ ಜೇಟ್ಲಿ ಮತ್ತು ಎಸ್ಎಡಿ ನಾಯಕ ಬಿಕ್ರಮ್ ಸಿಂಗ್ ಮಜಿಥಿಯಾ ಅವರ ಬಳಿ ಕ್ಷಮೆ ಕೇಳಬೇಕಾಯಿತು ಎಂದು ಚನ್ನಿ ಹೇಳಿದ್ದಾರೆ.
ಚಮ್ಕೌರ್ ಸಾಹಿಬ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಚನ್ನಿ, ‘ಕೇಜ್ರಿವಾಲ್ ಈಗ ಎಲ್ಲಾ ಮಿತಿಗಳನ್ನು ಮೀರಿದ್ದಾರೆ ಮತ್ತು ಆಪ್ ನಾಯಕನ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಅನುಮತಿ ನೀಡುವಂತೆ ತಮ್ಮ ಪಕ್ಷವನ್ನು ಕೋರಿರುವುದಾಗಿ ಹೇಳಿದ ಅವರು, ನಾನು ಕೇಜ್ರಿವಾಲ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಮತ್ತು ಅದಕ್ಕೆ ಅವಕಾಶ ನೀಡುವಂತೆ ಪಕ್ಷಕ್ಕೆ ಮನವಿ ಮಾಡಿದ್ದೇನೆ ಎಂದರು.
ಕೇಜ್ರಿವಾಲ್ ವಿರುದ್ಧ ಕೇಸ್ ದಾಖಲಿಸುವಂತೆ ನನ್ನ ಮೇಲೆ ಒತ್ತಡ ಹೆಚ್ಚಾಗುತ್ತಿದೆ. ದೆಹಲಿ ಸಿಎಂ ನನ್ನನ್ನು ಅಪ್ರಾಮಾಣಿಕ ಎಂದು ಕರೆಯುತ್ತಿದ್ದಾರೆ. ಅಲ್ಲದೆ, ತಮ್ಮ ಟ್ವಿಟರ್ ಹ್ಯಾಂಡಲ್ನಲ್ಲಿ ಈ ಬಗ್ಗೆ ಪೋಸ್ಟ್ ಸಹ ಹಾಕಿದ್ದಾರೆ ಎಂದು ಪಂಜಾಬ್ ಸಿಎಂ ಚನ್ನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.




