ಒಮಿಕ್ರಾನ್ ಹೆಚ್ಚಳ ಹಿನ್ನೆಲೆ:
ರಾತ್ರಿ ಕರ್ಫ್ಯೂ ಸೇರಿದಂತೆ ಮುಂಜಾಗ್ರತಾ ಕ್ರಮಗಳ ಬಗ್ಗೆ ಚರ್ಚಿಸಿ ಕ್ರಮ: ಬಸವರಾಜ ಬೊಮ್ಮಾಯಿ
ಹುಬ್ಬಳ್ಳಿ: ಒಮಿಕ್ರಾನ್ ಹೆಚ್ಚಳ ಹಿನ್ನೆಲೆಯಲ್ಲಿ ರಾತ್ರಿ ಕರ್ಫ್ಯೂ ಸೇರಿದಂತೆ ಮುಂಜಾಗ್ರತಾ ಕ್ರಮಗಳ ಬಗ್ಗೆ ರವಿವಾರ ಬೆಂಗಳೂರಿನಲ್ಲಿ ತಜ್ಞರು, ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಮಿಕ್ರಾನ್ ವಿಚಾರದಲ್ಲಿ ನಮಗೆ ಮಹಾರಾಷ್ಟ್ರ, ಕೇರಳದಿಂದ ಹೆಚ್ಚು ಆತಂತವಿತ್ತು. ಇದೀಗ ತಮಿಳುನಾಡಿನಲ್ಲಿಯೂ ಪ್ರಕರಣ ಗಳು ಹೆಚ್ಚುತ್ತಿವೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮುಂದಿನ ಕ್ರಮ, ಹೊಸ ವರ್ಷಾಚರಣೆ ಬಗ್ಗೆಯೂ ಚರ್ಚಿಸಲಾಗುವುದು ಎಂದರು.
ವಿಧಾನಪರಿಷತ್ತುನಲ್ಲಿ ಮತಾಂತರ ನಿಷೇಧ ಕಾಯ್ದೆ ಅಂಗೀಕಾರ ವಿಚಾರದಲ್ಲಿ ಸರಕಾರಕ್ಕೆ ಯಾವುದೇ ಹಿನ್ನಡೆಯಾಗಿಲ್ಲ. ಮೇಲ್ಮನೆಯಲ್ಲಿ ನಮಗೆ ಬೆಂಬಲ ಇಲ್ಲ. ಜತೆಗೆ 3-4 ಜನ ನಮ್ಮ ಪಕ್ಷದ ಸದಸ್ಯರು ಇರಲಿಲ್ಲ. ಇನ್ನು ಇಬ್ಬರು ಸದಸ್ಯರು ಬಂದಿದ್ದರೂ ಮಂಡನೆ ಮಾಡುತ್ತಿದ್ದೆವು ಎಂದರು.
ಪರಿಷತ್ ನಲ್ಲಿ ಪ್ರತಿಪಕ್ಷದ ಸದಸ್ಯರ ವರ್ತನೆ ಸರಿಯಲ್ಲ. ಪ್ರತಿಪಕ್ಷದ ಸದಸ್ಯರು ಹಠದ ಧೋರಣೆ ತೋರಿದರಲ್ಲದೆ, ಸಭಾಪತಿ ಅವರಿಗೆ ಅವಮಾನಕರ ರೀತಿ ಮಾತನಾಡಿದ್ದು, ಖಂಡನೀಯ. ನೊಂದ ಸಭಾಪತಿ ಬಸವರಾಜ ಹೊರಟ್ಟಿ ಅವರು ರಾಜೀನಾಮೆಗೆ ಮುಂದಾಗಿದ್ದರು ನಾನು ಮನವೊಲಿಸಿದೆ ಎಂದರು.
ದಾವೋಸ್ ಶೃಂಗಸಭೆ ಮುಂದೂಡಿಕೆಯಾಗಿದ್ದು, ಸದ್ಯ ವಿದೇಶ ಯಾವುದೇ ಪ್ರವಾಸ ಇಲ್ಲ ಎಂದರು.




