ರೈಲಿನಲ್ಲಿ ಬಾಂಬ್ ಇದೆ ಎಂದ ಉಮಾಭಾರತಿ:
ಲಲಿತ್ಪುರ ನಿಲ್ದಾಣದಲ್ಲಿ ಎರಡು ಘಂಟೆ ರೈಲು ಸ್ಥಗಿತ
ಝಾನ್ಸಿ: ಖಜುರಾಹೊ ಕುರುಕ್ಷೇತ್ರ ಎಕ್ಸ್ಪ್ರೆಸ್ (ರೈಲು ಸಂಖ್ಯೆ. 11841) ಗುರುವಾರ ರಾತ್ರಿ ಲಲಿತ್ಪುರ ನಿಲ್ದಾಣದಲ್ಲಿ ಮಧ್ಯಪ್ರದೇಶದ ಟಿಕಾಮ್ ಘಡ್ ನಿಂದ ದೆಹಲಿಗೆ ಹೊರಟಿದ್ದ ರೈಲಿನಲ್ಲಿ ಬಾಂಬ್ ಇದೆ ಎಂದು ಬಿಜೆಪಿ ನಾಯಕಿ ಉಮಾ ಭಾರತಿ ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ, ರೈಲು ಪ್ರಯಾಣದ ಮಧ್ಯೆ ಸುಮಾರು 2 ತಾಸು ನಿಲುಗಡೆಯಾದ ಘಟನೆ ನಡೆದಿದೆ.
ಲಲಿತ್ಪುರದಲ್ಲಿ ಎರಡು ತಾಸುಗಳ ಕಾಲ ರೈಲನ್ನು ಪರಿಶೀಲನೆ ನಡೆಸಿ, ನಂತರ ಅಲ್ಲಿಂದ ಮುಂದಕ್ಕೆ ಚಲಿಸಿದೆ. ರೈಲಿನ ಎಸಿ ಕೋಚ್ ಗಳು ಇರುವ ಕಾಂಪಾರ್ಟ್ ಮೆಂಟ್ ನಲ್ಲಿ ಉಮಾ ಭಾರತಿ ಗುರುವಾರ ರಾತ್ರಿ ಪ್ರಯಾಣ ಮಾಡುತ್ತಿದ್ದರು. ಉತ್ತರಪ್ರದೇಶದ ಲಲಿತ್ ಪುರದ ಹೊರವಲಯಕ್ಕೆ ಬರುತ್ತಿದ್ದಂತೆ ಉಮಾ ಭಾರತಿ, ರೈಲಿನಲ್ಲಿ ಬಾಂಬ್ ಇರುವ ಶಂಕೆ ವ್ಯಕ್ತವಾಗುತ್ತಿದೆ ಎಂದು ರೈಲ್ವೆ ಸಿಬ್ಬಂದಿಗೆ ಹೇಳಿದರು.
ಅದಾದ ಬಳಿಕ ಲಲಿತ್ಪುರ ರೈಲ್ವೆ ಸ್ಟೇಶನ್ ನಲ್ಲಿ 9.40ರ ಹೊತ್ತಿಗೆ ರೈಲನ್ನು ನಿಲ್ಲಿಸಲಾಯಿತು. ಸುಮಾರು 11.30ರವರೆಗೆ ರೈಲ್ವೆ ಪೊಲೀಸ್ ಪಡೆ ಮತ್ತು ಸರ್ಕಾರಿ ರೈಲ್ವೆ ಪೊಲೀಸರು ಇಡೀ ರೈಲನ್ನು ಪರಿಶೀಲಿಸಿದರು. ಆದರೆ ಯಾವುದೇ ಬಾಂಬ್ ಆಗಲಿ, ಸ್ಫೋಟಕವಾಗಲಿ ಪತ್ತೆಯಾಗಿಲ್ಲ. ಲಲಿತ್ಪುರದಿಂದ 11.30ಕ್ಕೆ ರೈಲು ಹೊರಟು, ನಂತರ ಝಾನ್ಸಿಯಲ್ಲಿ ಮತ್ತೊಮ್ಮೆ ರೈಲನ್ನು ಪರಿಶೀಲನೆಗೆ ಒಳಪಡಿಸಲಾಯಿತು. ಆದರೆ ಉಮಾ ಭಾರತಿ ಯಾಕೆ ಬಾಂಬ್ ಇದೆ ಎಂದು ಹೇಳಿದರು ಎಂಬ ಬಗ್ಗೆ ಇನ್ನೂ ಸ್ಪಷ್ಟವಾಗಿಲ್ಲ.




