ಟ್ಯೂಷನ್ ಗೆ ಬಂದ ವಿದ್ಯಾರ್ಥಿನಿಯ ಕಿಡ್ನ್ಯಾಪ್: ಆರೋಪಿ ಸುಳಿವು ಕೊಟ್ಟವರಿಗೆ ಬಹುಮಾನ ಘೋಷಣೆ

ರಾಮನಗರ: ಪ್ರೀತಿ-ಪ್ರೇಮದ ಹೆಸರಿನಲ್ಲಿ ಟ್ಯೂಷನ್ ಟೀಚರ್ನಿಂದಲೇ 10ನೇ ತರಗತಿ ವಿದ್ಯಾರ್ಥಿನಿ ಕಿಡ್ನ್ಯಾಪ್ ಆಗಿರುವ ಘಟನೆ ನಡೆದಿದೆ.
ಕನಕಪುರ ಮೂಲದ ಬಾಲಕಿ ತಂದೆಯಿಂದ ಜೆ.ಪಿ.ನಗರ ಠಾಣೆಯಲ್ಲಿ ಕಿಡ್ನಾಪ್ ಪ್ರಕರಣ ದಾಖಲಾಗಿದೆ. ಕನಕಪುರ ಮೂಲದ ಟ್ಯೂಷನ್ ಟೀಚರ್ ಅಭಿಷೇಕ್ನಿಂದ ವಿದ್ಯಾರ್ಥಿನಿ ಅಪಹರಣವಾಗಿದೆ.
ಕಳೆದ ನ.23 ರಂದು ಎಂದಿನಂತೆ ಆರೋಪಿ ಬಳಿ ಟ್ಯೂಷನ್ಗೆ ವಿದ್ಯಾರ್ಥಿನಿ ಬಂದಿದ್ದಳು. ಟ್ಯೂಷನ್ ಮುಗಿದು ರಾತ್ರಿಯಾದರೂ ಮನೆಗೆ ವಾಪಸ್ ಆಗಿರಲಿಲ್ಲ. ರಾತ್ರಿ ಟ್ಯೂಷನ್ ಸೆಂಟರ್ ಬಳಿ ಹೋದಾಗ ಬಾಲಕಿಯನ್ನ ಟ್ಯೂಷನ್ ಟೀಚರ್ ಕರೆದೊಯ್ದಿರೋದು ಗೊತ್ತಾಗಿದೆ.
ಬಾಲಕಿಯನ್ನ ಕರೆದೊಯ್ಯುವ ವೇಳೆ ಮನೆಯ ರೂಂನಲ್ಲೇ ಮೊಬೈಲ್ ಬಿಟ್ಟು ಆರೋಪಿ ಪರಾರಿಯಾಗಿದ್ದಾನೆ. ಕಳೆದ ನಲವತ್ತು ದಿನಗಳಿಂದ ಸಣ್ಣ ಸುಳಿವು ಸಿಗದಂತೆ ಅಪ್ರಾಪ್ತೆ ಜೊತೆ ತಲೆಮರೆಸಿಕೊಂಡಿದ್ದಾನೆ.
ಪೋನ್ ಬಳಕೆ ಮಾಡ್ತಿಲ್ಲ. ಪೋನ್ ಪೇ, ಗೂಗಲ್ ಪೇ, ಎಟಿಎಂ ಸೇರಿ ಆನ್ಲೈನ್ ಪೇಮೆಂಟ್ ಕೂಡ ಆರೋಪಿ ಮಾಡುತ್ತಿಲ್ಲ. ಕಳೆದ ನಲವತ್ತು ದಿನಗಳಿಂದ ಬೆಂಗಳೂರು ರಾಮನಗರ, ಕನಕಪುರ ಸೇರಿ ಹಲವು ಕಡೆ ಆರೋಪಿಗಾಗಿ ಪೊಲೀಸರು ತಲಾಶ್ ನಡೆಸಿದ್ದಾರೆ.
ಸದ್ಯ ಆರೋಪಿ ಸುಳಿವು ಕೊಟ್ಟವರಿಗೆ 25,000 ಸಾವಿರ ಬಹುಮಾನ ನೀಡುವುದಾಗಿ ಪೊಲೀಸ್ ಪ್ರಕಟಣೆಯಲ್ಲಿ ಘೋಷಿಸಲಾಗಿದೆ. ಆರೋಪಿ ಪತ್ತೆಯಾಗದ ಹಿನ್ನೆಲೆ ಪೊಲೀಸರು ಲುಕ್ಔಟ್ ನೋಟಿಸ್ ಹೊರಡಿಸಿದ್ದಾರೆ.