ಸಿಡಿಲು ಬಡಿದು ರೈತ ಸ್ಥಳದಲ್ಲೇ ಮೃತ್ಯು
ಗದಗ: ಜಿಲ್ಲೆ ರೋಣ ತಾಲ್ಲೂಕಿನ ಮೆಣಸಗಿ ಗ್ರಾಮದಲ್ಲಿ ಮಂಗಳವಾರ ಸಂಜೆ, ಕೆಲಸ ಮುಗಿಸಿಕೊಂಡು ಮನೆಗೆ ವಾಪಸ್ ಬರುತ್ತಿದ್ದಾಗ ಸಿಡಿಲು ಬಡಿದು 58 ವರ್ಷದ ರೈತ ನಿಂಗಪ್ಪ ಅಮಾತ್ಯ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತ ರೈತ ನಿಂಗಪ್ಪ ಅಮಾತ್ಯ ಅವರು ಬೆಣ್ಣೆಹಳ್ಳ ಸಮೀಪದ ತಮ್ಮ ಜಮೀನಿನಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ಬರುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ. ಈ ಸಂದರ್ಭದಲ್ಲಿ ಪ್ರದೇಶದಲ್ಲಿ ಆಲಿಕಲ್ಲು, ಗುಡುಗು, ಸಿಡಿಲು ಸೇರಿದಂತೆ ಭಾರೀ ಮಳೆಯೂ ಸುರಿದಿತ್ತು. ಬಿರುಗಾಳಿ ಮಳೆಯ ಪರಿಣಾಮವಾಗಿ ಅನೇಕ ಮರಗಳು ಮತ್ತು ವಿದ್ಯುತ್ ಕಂಬಗಳು ಧರೆಗುರುಳಿದ್ದವು.




