ಬಂಟ್ವಾಳ: ಮನೆಯೊಳಗೆ ನುಗ್ಗಿ ವ್ಯಕ್ತಿಗೆ ಚೂರಿ ಇರಿತ ಪ್ರಕರಣ: ಆರೋಪಿ ಬಂಧನ
ಬಂಟ್ವಾಳ: ಮನೆಯೊಳಗೆ ನುಗ್ಗಿ ವ್ಯಕ್ತಿಯೋರ್ವನಿಗೆ ಚೂರಿ ಹಾಕಿ ಪರಾರಿಯಾಗಿದ್ದ ಆರೋಪಿಯನ್ನು ಬಂಟ್ವಾಳ ಗ್ರಾಮಾಂತರ ಪೋಲೀಸ್ ಬಂಧಿಸಿ ನ್ಯಾಯಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಈತನಿಗೆ 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ.
ಅಬ್ದುಲ್ ರಹಿಮಾನ್ ಎಂಬಾತ ಬಂಧಿತ ಆರೋಪಿಯಾಗಿದ್ದಾನೆ. ಈತನನ್ನು ಫರಂಗಿಪೇಟೆಯಲ್ಲಿ ಬಂಧಿಸಲಾಗಿದೆ.
ಘಟನೆಯ ವಿವರ:
ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯ ಪುದು ಎಂಬಲ್ಲಿ ಪುದು ಗ್ರಾಮದ 10 ನೇ ಮೈಲಿಕಲ್ಲು ನಿವಾಸಿ ಮಹಮ್ಮದ್ ರಮೀಜ್ ( 19) ಎಂಬಾತನಿಗೆ ಮನೆಗೆ ನುಗ್ಗಿ ಚೂರಿಯಿಂದ ಇರಿಯಲಾಗಿತ್ತು.
ಅಬ್ದುಲ್ ರಹಿಮಾನ್ ಎಂಬಾತ ಚೂರಿ ಇರಿದು ಪರಾರಿಯಾಗಿದ್ದ ಬಳಿಕ ಈತನಿಗಾಗಿ ಪೋಲೀಸ್ ತಂಡ ಹುಡುಕಾಟ ನಡೆಸುತ್ತಿತ್ತು. ಇದೀಗ ಆರೋಪಿಯನ್ನು ಪೋಲೀಸರು ಫರಂಗಿಪೇಟೆಯಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಆರೋಪಿ ಫರಂಗಿಪೇಟೆಯಲ್ಲಿ ಈ ಹಿಂದೆ ನಡೆದ ಚೂರಿ ಇರಿತ ಪ್ರಕರಣವೊಂದರ ಆರೋಪಿ ಕೂಡ ಆಗಿದ್ದ ಎಂದು ಪೋಲೀಸ್ ಮೂಲಗಳು ತಿಳಿಸಿವೆ. ಆರೋಪಿ ಅಬ್ದುಲ್ ರಹಿಮಾನ್ ಯಾವುದೋ ಹಣಕಾಸಿನ ಮತ್ತು ಹಳೆಯ ದ್ವೇಷದ ಹಿನ್ನೆಲೆಯಲ್ಲಿ ರಮೀಜ್ ನನ್ನು ಕೊಲೆ ಮಾಡುವ ಉದ್ದೇಶದಿಂದ ಪೋನ್ ಮಾಡಿ ಮನೆಯಲ್ಲಿರುವುದನ್ನು ಖಚಿತಪಡಿಸಿಕೊಂಡು, ಮನೆಯೊಳಗೆ ಬಂದು ಚೂರಿಯಿಂದ ಎರಡುಬಾರಿ ತಿವಿದು ಪರಾರಿಯಾಗಿದ್ದ.





