ಮೈಸೂರು: ಕುಡಿತದ ಅಮಲಿನಲ್ಲಿ ವ್ಯಕ್ತಿಯಿಂದ ಏಳು ಜನರ ಮೇಲೆ ಹಲ್ಲೆ:
ಓರ್ವ ಮಹಿಳೆ ಮೃತ್ಯು
ಮೈಸೂರು: ಕುಡಿದ ಅಮಲಿನಲ್ಲಿ ವ್ಯಕ್ತಿಯೊಬ್ಬ ಓರ್ವ ಮಹಿಳೆ ಹತ್ಯೆಗೈದು, ಆರು ಜನರ ಮೇಲೆ ಹಲ್ಲೆ ನಡೆಸಿದ್ದಾನೆ.
ಈರಯ್ಯ ಅಲಿಯಾಸ್ ಕುಂಡ ಎಂಬುವವನು ಎದುರುಗಡೆ ಮನೆಯವನ ಮೇಲಿನ ಸಿಟ್ಟಿಗೆ ಆತನ ತಾಯಿಯನ್ನು ಕೊಂದಿದ್ದಾನೆ. ಅಡ್ಡ ಬಂದ ಗರ್ಭಿಣಿ ಪತ್ನಿ ಹಾಗೂ ಅತ್ತೆ, ಮಾವ ಸೇರಿ ಒಟ್ಟು ಆರು ಜನರ ಮೇಲೆ ಹಲ್ಲೆ ನಡೆಸಿದ್ದಾನೆ. ಈ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ನವಿಲೂರು ಎಂಬಲ್ಲಿ ನಡೆದಿದೆ.
ನವಿಲೂರಿನ ನಿಂಗಮ್ಮ(50) ಕೊಲೆಯಾದ ಮಹಿಳೆ. ಈರಯ್ಯ ತಡೆಯಲು ಹೋಗಿದ್ದ ಗರ್ಭಿಣಿ ಪತ್ನಿ ಮಹದೇವಮ್ಮ ಮೇಲೆ ಹಲ್ಲೆ ನಡೆಸಿದ್ದಾನೆ. ಇನ್ನು ಹಲ್ಲೆಗೊಳಗಾದ ಅತ್ತೆ ಗೌರಮ್ಮ ಮತ್ತು ಮಾವ ಸುರೇಶ್ ಅಲಿಯಾಸ್ ಕೂಸು ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳಿಗೆ ಸದ್ಯ ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹಂತಕ ಈರಯ್ಯನನ್ನು ನಂಜನಗೂಡು ಪೊಲೀಸರು ಬಂಧಿಸಿದ್ದಾರೆ.
ಈರಯ್ಯ ಮೊದಲ ಪತ್ನಿಯನ್ನು ಕೊಂದು ಜೈಲಿಗೆ ಹೋಗಿದ್ದ. ಜಾಮೀನಿನ ಮೇಲೆ ಬಿಡುಗಡೆಯಾಗಿ 2ನೇ ಮದುವೆಯಾಗಿದ್ದ. ಆದರೆ ಇದೀಗ ಮತ್ತೆ ಇಬ್ಬರ ಕೊಲೆ ಮಾಡಿದ್ದಾನೆ. ಸ್ಥಳಕ್ಕೆ ಎಸ್ಪಿ ಆರ್.ಚೇತನ್, ಡಿವೈಎಎಸ್ಪಿ ಗೋವಿಂದರಾಜ್, ಸರ್ಕಲ್ ಇನ್ಸ್ಪೆಕ್ಟರ್ ಲಕ್ಷ್ಮಿಕಾಂತ ತಳವಾರ್, ಇನ್ಸ್ಪೆಕ್ಟರ್ ಶಿವನಂಜಶೆಟ್ಟಿ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.




