ಮಂಟಪದಲ್ಲಿ ವರದಕ್ಷಿಣಿಗೆ ಬೇಡಿಕೆ ಇಟ್ಟ ವರ: ವರನನ್ನು ಮರಕ್ಕೆ ಕಟ್ಟಿಹಾಕಿದ ಗ್ರಾಮಸ್ಥರು
ಲಕ್ನೋ: ವಿವಾಹ ಮಂಟಪದಲ್ಲಿ ವರ, ವಧುವಿನ ಕೊರಳಿಗೆ ಮಾಲೆಯನ್ನು ಹಾಕುವ ಮೊದಲು ವರದಕ್ಷಿಣಿಗೆ ಬೇಡಿಕೆ ಇಟ್ಟಿದ್ದ, ಇದರಿಂದ ವಧುವಿನ ಪೋಷಕರು ಆಘಾತಕ್ಕೊಳಗಾಗಿದ್ದರು. ಬಳಿಕ ವರನನ್ನು ಮರಕ್ಕೆ ಕಟ್ಟಿಹಾಕಿ ಒತ್ತೆಯಾಳನ್ನಾಗಿ ಇರಿಸಿಕೊಂಡ ಘಟನೆ ಉತ್ತರಪ್ರದೇಶದ ಪ್ರತಾಪ್ ಗಢದಲ್ಲಿ ನಡೆದಿದೆ.
ವರನನ್ನು ಮರಕ್ಕೆ ಕಟ್ಟಿ ಹಾಕಿ, ಒತ್ತೆಯಾಳನ್ನಾಗಿ ಇರಿಸಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿವಾಹ ಮಂಟಪದಲ್ಲಿ ವಧು-ವರ ಹಾರ ಬದಲಾಯಿಸಿಕೊಳ್ಳುವ ಸಮಯದಲ್ಲೇ, ವರ ಅಮರ್ ಜಿತ್ ವರ್ಮಾ ವರದಕ್ಷಿಣೆಗಾಗಿ ಬೇಡಿಕೆ ಇಟ್ಟಿದ್ದ.
ಈ ಸಂದರ್ಭದಲ್ಲಿ ಅಮರ್ ಜಿತ್ ಕುಟುಂಬ ಸದಸ್ಯರು, ಗೆಳೆಯರು ವಧುವಿನ ಸಂಬಂಧಿಕರ ಜೊತೆ ಅನುಚಿತವಾಗಿ ನಡೆದುಕೊಂಡಿದ್ದು, ಇದರಿಂದಾಗಿ ಎರಡು ಕುಟುಂಬಗಳ ನಡುವೆ ಹೊಯ್ ಕೈ ನಡೆದಿರುವುದಾಗಿ ವರದಿ ತಿಳಿಸಿದೆ.




