ಸಚಿವ ಸ್ಥಾನ ಕೊಡಿ ಎಂದು ನಾನು ಯಾರ ಕಾಲು ಹಿಡಿಯುವುದಿಲ್ಲ: ನನ್ನ ರಾಜೀನಾಮೆ ವಿಚಾರ ಸುಳ್ಳು: ಬಿಕೆ ಹರಿಪ್ರಸಾದ್ ಕಿಡಿ
ಬೆಂಗಳೂರು: ಸಚಿವ ಸ್ಥಾನ ಕೊಡಿ ಎಂದು ನಾನು ಯಾರ ಕಾಲು ಹಿಡಿಯುವುದಿಲ್ಲ. ನೂತನ ಸಚಿವರು 500 ವರ್ಷ ಅಧಿಕಾರದಲ್ಲಿ ಇರಬಹುದು. ನನಗೇನು ಗೊತ್ತಿಲ್ಲ. ಆದರೆ, ನನ್ನ ರಾಜೀನಾಮೆ ವಿಚಾರ ಸುಳ್ಳು ವ್ಯಾಟ್ಸಪ್ ಯೂನಿವರ್ಸಿಟಿ ಸೃಷ್ಟಿ ಎಂದು ವಿಧಾನಪರಿಷತ್ ಸದಸ್ಯ ಬಿಕೆ ಹರಿಪ್ರಸಾದ್ ಕಿಡಿಕಾರಿದ್ದಾರೆ.
ಶನಿವಾರ ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಮೇಲ್ಮನೆ ವಿಪಕ್ಷ ನಾಯಕರನ್ನು, ಸಭಾನಾಯಕರನ್ನ ಮಾಡೊದು ಸಂಪ್ರದಾಯ, ಪದ್ದತಿ ಹಿಂದಿನಿಂದಿಲೂ ಇತ್ತು. ಆ ಸಂಪ್ರದಾಯ ಮುರಿದಿದ್ದಾರೆ. ಸಚಿವ ಸ್ಥಾನ ಅದು ಮುಖ್ಯಮಂತ್ರಿಗಳ ಪರಮಾಧಿಕಾರ. ನಾನೆಂದೂ ಸಚಿವ ಸ್ಥಾನ ಬೇಕು ಎಂದು ಕೇಳಿಲ್ಲ. ಪರಿಷತ್ ನಲ್ಲಿ ಸಭಾನಾಯಕರನ್ನಾಗಿ ಯಾರನ್ನ ಮಾಡಬೇಕೆಂದು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಯವರನ್ನೇ ಕೇಳಿ ಎಂದು ಬೇಸರದ ನುಡಿಗಳನ್ನಾಡಿದರು.
ಎಷ್ಟು ದಿನ ಅಧಿಕಾರದಲ್ಲಿ ಇರುತ್ತಾರೆ ಎಂಬುದು ನನಗೆ ಗೊತ್ತಿಲ್ಲ. 5 ವರ್ಷ ಅಲ್ಲ 500 ವರ್ಷ ಇರಬಹುದು. ಬಿಜೆಪಿಯವರು ಕೂಡಾ ಇದೇ ತರಹ ನಂಬಿಕೆ ಇಟ್ಟುಕೊಂಡಿದ್ದರು. ನಾವು ಕೂಡಾ ಹಾಗೇ ನಂಬಿಕೆ ಇಟ್ಟುಕೊಳ್ಳೋಣ ಎಂದು ವ್ಯಂಗ್ಯವಾಡಿದರು.
ರಾಜೀನಾಮೆ ಕೊಡ್ತೀನಿ ಎಂದು ನಾನು ಎಲ್ಲೂ ಹೇಳಿಲ್ಲ. ಅದೆಲ್ಲ ವಾಟ್ಸಾಪ್ ಯುನಿವರ್ಸಿಟಿಯಲ್ಲಿ ಬಂದಂತಹ ವಿಷಯ. ನನ್ನ ಪರಮೋಚ್ಛ ನಾಯಕಿ ಸೋನಿಯಾ ಗಾಂಧಿಯವರು ನನ್ನ ಮೇಲೆ ಜವಾಬ್ದಾರಿ ಕೊಟ್ಟು ಪರಿಷತ್ ಸದಸ್ಯತ್ವ ಸ್ಥಾನ ನೀಡಿದ್ದಾರೆ. ಅದನ್ನ ನಿಭಾಯಿಸುತ್ತಿದ್ದೇನೆ. ರಾಜೀನಾಮೆ ನೀಡುವುದಾದರೆ ಸೋನಿಯಾಗಾಂಧಿ ಹಾಗೂ ಸಭಾಪತಿಯವರಿಗೆ ನೀಡುತ್ತೇನೆ. ಸಚಿವ ಸ್ಥಾನ ಇಲ್ಲದಿದ್ದರೂ ನಾನು ಪರಿಷತ್ನಲ್ಲಿ ಸಾಮಾನ್ಯ ಸದಸ್ಯನಾಗಿರುತ್ತೇನೆ ಎಂದು ಸ್ಪಷ್ಟಪಡಿಸಿದರು.
ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಲು ಕೇವಲ ಒಂದು ಹೆಜ್ಜೆ ಮಾತ್ರ ಇದೆ. ಅಧಿಕಾರ ಹಂಚಿಕೆ ಕೇವಲ ಏಳು ಜನರಿಗೆ ಮಾತ್ರ ಗೊತ್ತಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಕೆಸಿ ವೇಣುಗೋಪಾಲ್ ಹಾಗೂ ಸುರ್ಜೇವಾಲಾ ಅವರಿಗೆ ಮಾತ್ರ ಗೊತ್ತಿದೆ. ಉಳಿದವರು ಯಾರೇ ಮಾತಾಡಿದರೂ ಕೇವಲ ಒಬ್ಬರನ್ನ ಓಲೈಸಿಕೊಳ್ಳಲು ಮಾತ್ರ. ಯಾರೇ ಅಧಿಕಾರ ಹಂಚಿಕೆ ಬಗ್ಗೆ ಮಾತಾಡಿದರೂ ಅದು ಸುಳ್ಳು ಎಂದರು
ವೀರಪ್ಪ ಮೊಯಿಲಿಯವರ ಮಾತಿಗೆ ನಾನೇನು ಹೇಳೊಲ್ಲ, ಅವರ ಜ್ಞಾನಭಂಡಾರ ಇರುವಂತವರು. ಅವರ ಮಾತಿಗೆ ನಾನೇನು ಹೇಳೊಲ್ಲ. ನಾನೂ ಪಕ್ಷ ಕಟ್ಟಿದವನು. ಸ್ವಂತ ಮನೆಯಲ್ಲಿ ಇರುವವನು, ಬಾಡಿಗೆ ಮನೆ ತಗೊಂಡು ಬಂದವನು. ಈ ಮನೆ ಬಿಟ್ಟು ಹೋಗೋದಕ್ಕೆ , ಅಥವ ಧ್ವಂಸ ಮಾಡೊದಿಕ್ಕೆ. ರಾಜೀನಾಮೆ ಯೆಲ್ಲ ವಾಟ್ಸಾಪ್ ಯೂನಿವರ್ಸಿಟಿ ಸೃಷ್ಠಿ. ಪಕ್ಷದಲ್ಲಿ ಸಕ್ರಿಯ ವಾಗಿರುವವರಿಗೆ ಮಣೆ ಹಾಕುವುದು ಪದ್ದತಿ. ಸಾಂಧರ್ಬಿಕವಾಗಿ ನಾನು ಹೇಳ ಬೇಕಾದಾಗ ಹೇಳ್ತೀನಿ. ಪಕ್ಷ ನಿಷ್ಠೆ ವಿಷಯ ಹಲವಾರು ಆಯಾಮಗಳಿದೆ. ಕಾಲ ನಿರ್ಧರ ಮಾಡಲಿದೆ ಎಂದರು.




