ಮನೆಗೆ ಬೆಂಕಿ ತಗುಲಿ ಮಲಗಿದ್ದ ನಾಲ್ವರು ಬಾಲಕಿಯರು ಸುಟ್ಟು ಕರಕಲು
ಬಿಹಾರ: ಮನೆಗೆ ಬೆಂಕಿ ತಗುಲಿ ಮಲಗಿದ್ದ ನಾಲ್ವರು ಬಾಲಕಿಯರು ಸುಟ್ಟು ಕರಕಲಾಗಿದ್ದು, 6 ಮಂದಿ ಗಾಯಗೊಂಡಿರುವ ಘಟನೆ ಮುಜಾಫರ್ಪುರ ಜಿಲ್ಲೆಯಲ್ಲಿ ನಡೆದಿದೆ.
ನರೇಶ್ ರಾಮ್ ಎಂಬವರ ಪುತ್ರಿ ಸೋನಿ ಕುಮಾರಿ (15), ಅಮೃತಾ ಕುಮಾರಿ (12), ಕವಿತಾ ಕುಮಾರಿ(8), ಶಿವಾನಿ ಕುಮಾರಿ(6) ಮೃತ ದುರ್ದೈವಿಗಳು ಎಂದು ತಿಳಿದು ಬಂದಿದೆ.
ರಾಮದಯಾಳು ಠಾಣೆ ಬಳಿಯ ಗುಡಿಸಲಿನಂತಿರುವ ಮನೆಯಲ್ಲಿ ಅಗ್ನಿ ಅನಾಹುತ ಸಂಭವಿಸಿ ನಾಲ್ವರು ಮೃತಪಟ್ಟಿದ್ದು, ಆರು ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆ ಬಳಿಕ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದವರು ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗಾಯಾಳುಗಳನ್ನು ಕೂಡಲೇ ಸಮೀಪದ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಗಾಯಗೊಂಡವರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಸದರ್ ಠಾಣೆಯ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಅಗ್ನಿ ಅನಾಹುತಕ್ಕೆ ಕಾರಣವಾದ ಬಗ್ಗೆ ತನಿಖೆ ನಡೆಯುತ್ತಿದೆ. ಈ ಕುರಿತು ಸದರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




