March 22, 2026

ಬೆಂಗಳೂರು: ಮಹಿಳಾ ಪ್ರಯಾಣಿಕರ ಜೊತೆಗೆ ಅನುಚಿತ ವರ್ತನೆ: ರೈಲ್ವೆ ಟಿಟಿಇ ಅಮಾನತು

0
n4807942781678952203539f304f121d4d1327482d337e552c2a89350b9fe2d5975a101e9067b26cdfff7ce.jpg

ಬೆಂಗಳೂರು: ನಗರದ ಕೃಷ್ಣರಾಜಪುರ ರೈಲ್ವೆ ನಿಲ್ದಾಣದ ಬಳಿ ಮಹಿಳಾ ಪ್ರಯಾಣಿಕರ ಜೊತೆಗೆ ಅನುಚಿತ ವರ್ತನೆ ತೋರಿದ ಆರೋಪ ಹಿನ್ನೆಲೆಯಲ್ಲಿ ರೈಲ್ವೆ ಟಿಕೆಟ್‌ ತಪಾಸಕನನ್ನು (ಟಿಟಿಇ) ಸಂತೋಷ್‌ ಎಂಬವರನ್ನು ನೈಋುತ್ಯ ರೈಲ್ವೆ ಅಮಾನತುಗೊಳಿಸಿದೆ‌.

ಮಂಗಳವಾರ ಸಂಜೆ ಘಟನೆ ನಡೆದ ಬಳಿಕ ಮಹಿಳೆಯೊಬ್ಬರು ರಾತ್ರಿ ಟ್ವಿಟರ್‌ನಲ್ಲಿ ಯುವತಿ ಹಾಗೂ ಟಿಟಿಇ ನಡುವೆ ವಾಗ್ವಾದ ನಡೆಯುತ್ತಿರುವ ವಿಡಿಯೋವನ್ನು ಅಪ್‌ಲೋಡ್‌ ಮಾಡಿದ್ದು, ಇದು ವೈರಲ್‌ ಆಗಿದೆ. ಈ ಹಿನ್ನೆಲೆಯಲ್ಲಿ ಬುಧವಾರ ಟಿಟಿಇ ಮೇಲೆ ರೈಲ್ವೆ ಇಲಾಖೆ ಕ್ರಮ ಕೈಗೊಂಡಿದೆ.

ಹೌರಾ- ಎಸ್‌ಎಂವಿಬಿ (22863) ರೈಲ್ವೆ ಕೃಷ್ಣರಾಜಪುರ ನಿಲ್ದಾಣದಲ್ಲಿ ರೈಲು ನಿಲುಗಡೆ ಆಗಿದೆ. ಈ ಸಂದರ್ಭದಲ್ಲಿ ಮಹಿಳೆ ಹಾಗೂ ಟಿಟಿಇ ನಡುವೆ ವಾಗ್ವಾದ ನಡೆದಿದೆ. ಲಗೇಜ್‌ಗೊಂದಿಗೆ ಪ್ಲಾಟ್‌ಫಾರ್ಮ್ ನಲ್ಲಿರುವ ಯುವತಿಗೆ ಟಿಕೆಟ್‌ ತೋರಿಸುವಂತೆ ಟಿಟಿಇ ದಬಾಯಿಸುತ್ತಿರುವುದು ವಿಡಿಯೋದಲ್ಲಿದೆ. ಅಲ್ಲದೆ ಆತ ತನ್ನನ್ನು ದೂಡಿದ್ದಾನೆ ಎಂದು ಯುವತಿ ಹಾಗೂ ಸ್ಥಳದಲ್ಲಿದ್ದ ಪ್ರಯಾಣಿಕ ಆರೋಪಿಸಿದ್ದಾರೆ. ಅಲ್ಲದೆ ಟಿಟಿಇ ಮದ್ಯಪಾನ ಮಾಡಿ ಅನುಚಿತ ವರ್ತನೆ ತೋರುತ್ತಿದ್ದಾರೆ ಎಂದು ದೂರಲಾಗಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬೆಂಗಳೂರು ನೈಋುತ್ಯ ರೈಲ್ವೆ ವಿಭಾಗದ ಹೆಚ್ಚುವರಿ ವ್ಯವಸ್ಥಾಪಕಿ ಕುಸುಮಾ ಹರಿಪ್ರಸಾದ್‌, ಘಟನೆ ಗಮನಕ್ಕೆ ಬಂದ ಬಳಿಕ ಟಿಟಿಇ ಅಮಾನತು ಮಾಡಿದ್ದೇವೆ. ಆದರೆ, ಯುವತಿ ಟಿಕೆಟ್‌ ತೋರಿಸಿಲ್ಲ ಎಂಬ ಆರೋಪವಿದೆ. ಆಕೆ ಅದೇ ರೈಲಿನಲ್ಲಿ ಪ್ರಯಾಣಿಸುತ್ತಿದ್ದಳೋ ಅಥವಾ ಕೆ.ಆರ್‌.ಪುರ ನಿಲ್ದಾಣದಿಂದ ರೈಲನ್ನು ಹತ್ತಲು ಬಂದಿದ್ದಳೊ ತಿಳಿದಿಲ್ಲ. ಪಿಎನ್‌ಆರ್‌ ಸಂಖ್ಯೆ ತಿಳಿದುಕೊಳ್ಳಲು ನಾವು ಯುವತಿಗೆ ಸಾಕಷ್ಟುಬಾರಿ ಕರೆ ಮಾಡಿದ್ದರೂ ಆಕೆ ಸ್ವೀಕರಿಸಿಲ್ಲ. ಹೀಗಾಗಿ ಎರಡೂ ಕಡೆಯಿಂದ ಸಂಪೂರ್ಣ ತನಿಖೆ ಆಗಬೇಕಾಗುತ್ತದೆ. ಟಿಟಿಇ ತಪ್ಪೆಸಗಿದ್ದು ಸಾಬೀತಾದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!