ಉಳ್ಳಾಲ: ಕೇರಳ ಕಬಡ್ಡಿ ತಂಡದ ಮಾಜಿ ನಾಯಕ ಸುನಿಲ್ ಕುಮಾರ್ ನಿಧನ
ಉಳ್ಳಾಲ: ಕೇರಳ ರಾಜ್ಯ ಅಮೆಚೂರು ಕಬಡ್ಡಿ ತಂಡದ ಮಾಜಿ ನಾಯಕ ಹಾಗೂ ರಾಷ್ಟ್ರೀಯ ತಂಡದ ಮಾಜಿ ಕಬ್ಬಡ್ಡಿ ಪಟು ಮಂಜೇಶ್ವರ ನಿವಾಸಿ ಸುನಿಲ್ ಕುಮಾರ್ (53) ಇಂದು ಸ್ವಗೃಹದಲ್ಲಿ ನಿಧನಹೊಂದಿದರು.
ಅತೀವ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದ ಇವರು , ಗ್ಯಾಂಗ್ರೀನ್ ಗೆ ಒಳಗಾಗಿ ಹಲವು ತಿಂಗಳಿನಿಂದ ಅಸೌಖ್ಯಕ್ಕೊಳಗಾಗಿದ್ದರು. ಕೇರಳದಲ್ಲಿ ಹಿಂದೆ ಇದ್ದಂತಹ ಅಬಕಾರಿ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಅನಂತರ ಉದ್ಯಮ ನಡೆಸುತ್ತಿದ್ದರು.
ಕಬಡ್ಡಿ ಕೇರಳ ರಾಜ್ಯ ತಂಡದ ನಾಯಕರಾಗಿ ಹಲವು ವರ್ಷಗಳ ಕಾಲ ನೇತೃತ್ವ ವಹಿಸಿ ಹಲವು ಗೆಲುವಿನ ಜವಾಬ್ದಾರಿಯನ್ನು ನಿರ್ವಹಿಸಿದ್ದರು. ರಾಷ್ಟ್ರಮಟ್ಟದ ತಂಡದಲ್ಲಿ ಉತ್ತಮ ಆಟಗಾರರಾಗಿ ಮಿಂಚಿದ್ದ ಇವರು , ಕಾಸರಗೋಡು ಜಿಲ್ಲೆಯ ಹಲವು ಯುವ ಆಟಗಾರರಿಗೆ ರಾಜ್ಯ ತಂಡದಲ್ಲಿ ಪ್ರತಿನಿಧಿಸಲು ಅವಕಾಶವನ್ನು ಕಲ್ಪಿಸಿದ್ದರು. ಮೃತರಿಗೆ ಉಮಾಮಹೇಶ್ವರಿ ಕಬಡ್ಡಿ ಅಮೆಚೂರು ಅಸೋಸಿಯೇಷನ್ ತೀವ್ರ ಸಂತಾಪ ವ್ಯಕ್ತಪಡಿಸಿದೆ.




