July 15, 2026

ಸಂಸದೆ ಪ್ರಿಯಾಂಕಾ ಕಚೇರಿ ಸಿಬ್ಬಂದಿ ಹೆಸರಿನಲ್ಲಿ ಶಾಸಕಿಗೆ ಕರೆ: ಸಚಿವ ಸ್ಥಾನಕ್ಕೆ 3 ಕೋಟಿ ಬೇಡಿಕೆ

0
IMG-20260715-WA0042

ವಯನಾಡ್: ಸಂಸದೆ ಪ್ರಿಯಾಂಕಾ ಗಾಂಧಿ ಅವರ ಕಚೇರಿ ಸಿಬ್ಬಂದಿ ಎಂದು ಹೇಳಿಕೊಂಡಿರುವ ವ್ಯಕ್ತಿಯೊಬ್ಬ ಎಲ್ಲತ್ತೂರು ಶಾಸಕಿ ವಿದ್ಯಾ ಬಾಲಕೃಷ್ಣನ್ ಅವರಿಗೆ ಕರೆ ಮಾಡಿ ₹3 ಕೋಟಿ ನೀಡಿದರೆ ಸಚಿವ ಸ್ಥಾನ ಕೊಡಿಸುವುದಾಗಿ ತಿಳಿಸಿದ್ದಾನೆ.

ಆರೋಪಿಯನ್ನು ಪತ್ತೆಹಚ್ಚಲು ಕೋಯಿಕ್ಕೋಡ್ ಸೈಬರ್ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಜುಲೈ 6 ರಂದು ವಿದ್ಯಾ ಬಾಲಕೃಷ್ಣನ್‌ ಅವರಿಗೆ ವಾಟ್ಸ್‌ಆಯಪ್‌ ಮೂಲಕ ಕರೆ ಮಾಡಿರುವ ಆರೋಪಿ, ತನ್ನನ್ನು ರಾಜ್‌ ಕುಮಾರ್ ಎಂದು ಪರಿಚಯಿಸಿಕೊಂಡಿದ್ದು, ಪ್ರಿಯಾಂಕಾ ಗಾಂಧಿ ಕಚೇರಿಯಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದಾನೆ. ಕೇರಳಂನಲ್ಲಿ ಶೀಘ್ರದಲ್ಲೇ ಸಂಪುಟ ವಿಸ್ತರಣೆಯಾಗಲಿದ್ದು, ₹3 ಕೋಟಿ ನೀಡಿದರೆ ಸಚಿವ ಸ್ಥಾನ ಕೊಡಿಸುವುದಾಗಿ ಆತ ತಿಳಿಸಿದ್ದಾನೆ.

ಅಲ್ಲದೇ, ಕೋಯಿಕ್ಕೋಡ್‌ ಜಿಲ್ಲೆಯ ಸಂಸದರೊಬ್ಬರಿಂದ ನಿಮ್ಮ(ಶಾಸಕಿ) ದೂರವಾಣಿ ಸಂಖ್ಯೆಯನ್ನು ಪಡೆದುಕೊಂಡಿರುವುದಾಗಿ ಆತ ಹೇಳಿದ್ದಾನೆ.

ತಕ್ಷಣವೇ ವಿದ್ಯಾ ಅವರು ಸಂಸದರಿಗೆ ಕರೆ ಮಾಡಿ ವಿಚಾರಿಸಿದ್ದಾರೆ. ಆಗ ‘ತಮಗೆ ಎಐಸಿಸಿ ಪ್ರಧಾನ ಕಚೇರಿಯ ಅಧಿಕಾರಿ ಎಂದು ಪರಿಚಯಿಸಿಕೊಂಡ ವ್ಯಕ್ತಿಯೊಬ್ಬರಿಂದ ಕರೆ ಬಂದಿದ್ದು, ಇಬ್ಬರು ಶಾಸಕರ ದೂರವಾಣಿ ಸಂಖ್ಯೆಯನ್ನು ಹಂಚಿಕೊಂಡಿದ್ದಾಗಿ’ ಅವರು ತಿಳಿಸಿದ್ದಾರೆ.

ವಿದ್ಯಾ ಅವರು ಈ ಬಗ್ಗೆ ಎಐಸಿಸಿ ಕಚೇರಿಯನ್ನು ಸಂಪರ್ಕಿಸಿದಾಗ, ಅದು ನಕಲಿ ಕರೆ ಮತ್ತು ಎಐಸಿಸಿ ಪ್ರಧಾನ ಕಚೇರಿಯಲ್ಲಿ ಆ ಹೆಸರಿನ ಯಾರೂ ಇಲ್ಲ ಎಂಬುದು ದೃಢಪಟ್ಟಿದೆ.

Leave a Reply

Your email address will not be published. Required fields are marked *

You may have missed

error: Content is protected !!