ಬಾಂಗ್ಲದೇಶಿಗರ ಬಗ್ಗೆ ಶಂಕೆಯಿದ್ದರೆ ಪೊಲೀಸರಿಗೆ ತಿಳಿಸಿ, ಯಾರೇ ಆಗಲಿ ಪೊಲೀಸ್ ಕೆಲಸ ಮಾಡಲು ಹೋದರೆ ಕಠಿಣ ಕ್ರಮ: ಮಂಗಳೂರು ಪೊಲೀಸ್ ಕಮಿಷನರ್ ಖಡಕ್ ವಾರ್ನಿಂಗ್
ಮಂಗಳೂರು: ಬಾಂಗ್ಲದೇಶಿಗರ ಬಗ್ಗೆ ಶಂಕೆಯಿದ್ದರೆ ಪೊಲೀಸರಿಗೆ ತಿಳಿಸಿ, ಯಾರೇ ಆಗಲಿ ಪೊಲೀಸ್ ಕೆಲಸ ಮಾಡಲು ಹೋದರೆ ಕಠಿಣ ಕ್ರಮ ಜರುಗಿಸಬೇಕಾಗುತ್ತದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ಎಚ್ಚರಿಸಿದ್ದಾರೆ.
ಮಂಗಳೂರಿನಲ್ಲಿ ಅಕ್ರಮವಾಗಿ ವಾಸಿಸುತ್ತಿರುವ ಬಾಂಗ್ಲಾದೇಶಿಗಳ ಬಗ್ಗೆ ಮಾಹಿತಿ ನೀಡಲು ಯಾರಾದರೂ ಆಸಕ್ತಿ ಹೊಂದಿದ್ದರೆ ಪೊಲೀಸ್ ಇಲಾಖೆಯು ಅವರನ್ನು ಸ್ವಾಗತಿಸುತ್ತದೆ. ಅಕ್ರಮವಾಸಿಗಳನ್ನು ಗಡೀಪಾರು ಮಾಡಲು ಕೂಡ ಬಯಸುತ್ತೇವೆ. ಆದರೆ ಅಕ್ರಮವಾಸಿಗಳನ್ನು ಪರಿಶೀಲಿಸುವ ಮತ್ತು ಬಂಧಿಸುವ ಅಧಿಕಾರ ಪೊಲೀಸರಿಗೆ ಮಾತ್ರ ಇರುತ್ತದೆ. ಬೇರೆ ಯಾರಾದರೂ ಪೊಲೀಸ್ ಇಲಾಖೆಯ ಕೆಲಸ ಮಾಡಲು ಪ್ರಯತ್ನಿಸಿದರೆ, ಯಾವುದೇ ದೈಹಿಕ ಹಲ್ಲೆ ಮಾಡಿದರೆ ಸೆ.341 ಮತ್ತು 506ರ ಅನ್ವಯ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಕಳೆದ ವರ್ಷ ಇದೇ ರೀತಿ ಕೆಲವರು ಬಾಂಗ್ಲಾನ್ನರು ಅನ್ನುವ ಶಂಕೆಯಲ್ಲಿ ಉತ್ತರ ಭಾರತದ ಕಾರ್ಮಿಕರನ್ನು ವಿಚಾರಣೆ ಮಾಡಲು ಹೋಗಿ ಜೈಲು ಸೇರುವ ಸ್ಥಿತಿಯಾಗಿತ್ತು ಎಂದು ಉಲ್ಲೇಖಿಸಿರುವ ಕಮಿಷನರ್, ಯಾರನ್ನೇ ಆಗಲಿ ಗುರುತಿನ ಕಾರ್ಡ್ ತೋರಿಸುವಂತೆ ಪೀಡಿಸುವುದು ಆತನ ಖಾಸಗಿತನದ ಹಕ್ಕಿನ ಉಲ್ಲಂಘನೆ ಆಗುತ್ತದೆ ಎಂದು ಹೇಳಿದ್ದಾರೆ. ಅಲ್ಲದೆ, ನಾವು ದಾಳಿ ಮಾಡುತ್ತೇವೆಂದು ಹೇಳಿಕೊಂಡು ಯಾರಾದ್ರೂ ಕಾನೂನು ಕೈಗೆತ್ತಿಕೊಂಡರೆ ಬಂಧಿಸಿ ಕ್ರಮ ಜರುಗಿಸಲಾಗುವುದು. ವಲಸಿಗರು ಅನ್ನುವ ನೆಪದಲ್ಲಿ ಪರಿಶೀಲಿಸುವ ಅಧಿಕಾರ ಇದೆಯೇ, ಇಲ್ಲವೇ ಎಂಬುದನ್ನು ಆನಂತರ ಕೋರ್ಟಿನಲ್ಲಿ ತೋರಿಸಿಕೊಳ್ಳಬೇಕಷ್ಟೇ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಕೊಲೆ ಆರೋಪಿ ಪುನೀತ್ ಕೆರೆಹಳ್ಳಿ ಮಂಗಳೂರಿನಲ್ಲಿ ಬಾಂಗ್ಲಾನ್ನರ ಮೇಲೆ ದಾಳಿ ಮಾಡುತ್ತೇವೆ ಎಂದು ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಪೊಲೀಸ್ ಕಮಿಷನರ್ ಯಾರದ್ದೇ ಹೆಸರೆತ್ತದೆ ವಾರ್ನಿಂಗ್ ಮಾಡಿದ್ದಾರೆ.




