ಮಂಜೇಶ್ವರ: ಸೇತುವೆ ದಾಟುತ್ತಿದ್ದ ವೇಳೆಗೆ ನದಿಗೆ ಬಿದ್ದ ಕಾಲೇಜು ವಿದ್ಯಾರ್ಥಿನಿ: ಜೀವದ ಹಂಗು ತೊರೆದು ವಿದ್ಯಾರ್ಥಿನಿಯನ್ನು ರಕ್ಷಿಸಿದ ಯುವಕ
ಮಂಜೇಶ್ವರ: ಮಂಜೇಶ್ವರ ಸಮೀಪದ ಉಪ್ಪಳದ ಜೋಡುಕಲ್ಲು-ಮಡಂದೂರು ದೇರಂಬಳದಲ್ಲಿ ಅಡಿಕೆ ಮರದಿಂದ ನಿರ್ಮಿಸಲಾಗಿದ್ದ ತಾತ್ಕಾಲಿಕ ಸೇತುವೆ ದಾಟುತ್ತಿದ್ದ ವೇಳೆ ಕಾಲೇಜು ವಿದ್ಯಾರ್ಥಿನಿಯೊಬ್ಬರು ನದಿಗೆ ಬಿದ್ದು ಗಾಯಗೊಂಡ ಘಟನೆ ನಡೆದಿದೆ. ಸ್ಥಳದಲ್ಲಿದ್ದ ಯುವಕನ ಸಮಯೋಚಿತ ಸಾಹಸದಿಂದ ವಿದ್ಯಾರ್ಥಿನಿಯ ಜೀವ ಉಳಿದಿದೆ. ಗಾಯಗೊಂಡ ವಿದ್ಯಾರ್ಥಿನಿಯನ್ನು ನಿಶ್ಮಿತಾ ಎಂದು ಗುರುತಿಸಲಾಗಿದೆ.
ಮಾಹಿತಿಯ ಪ್ರಕಾರ, ನಿಶ್ಮಿತಾ ಅವರು ತಮ್ಮ ಸಹೋದರಿ ಸುಷ್ಮಿತಾ ಅವರೊಂದಿಗೆ ಬಸ್ನಿಂದ ಇಳಿದು ಮೀಂಜ ಕಡೆಗೆ ನಡೆದುಕೊಂಡು ಹೋಗುತ್ತಿದ್ದರು. ದಾರಿಯಲ್ಲಿದ್ದ ಅಡಿಕೆ ಮರದ ತಾತ್ಕಾಲಿಕ ಸೇತುವೆಯನ್ನು ಇಬ್ಬರೂ ಕೈಹಿಡಿದು ಜಾಗರೂಕತೆಯಿಂದ ದಾಟುತ್ತಿದ್ದ ವೇಳೆ ನಿಶ್ಮಿತಾ ಅವರು ಆಯತಪ್ಪಿ ಕೆಳಗೆ ಹರಿಯುತ್ತಿದ್ದ ನದಿಗೆ ಬಿದ್ದಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದ ದೇರಂಬಳದ ಉದಯ ಕುಮಾರ್ ಶೆಟ್ಟಿ ಯಾವುದೇ ಕ್ಷಣವೂ ವ್ಯರ್ಥ ಮಾಡದೆ ನದಿಗೆ ಧುಮುಕಿದರು. ಅಪಾಯವನ್ನು ಲೆಕ್ಕಿಸದೆ ಹರಿಯುತ್ತಿದ್ದ ನೀರಿನ ನಡುವೆ ಸಾಹಸಮಯವಾಗಿ ಕಾರ್ಯಾಚರಣೆ ನಡೆಸಿ ನಿಶ್ಮಿತಾ ಅವರನ್ನು ಸುರಕ್ಷಿತವಾಗಿ ದಡಕ್ಕೆ ಕರೆತಂದು ಜೀವ ಉಳಿಸಿದರು.
ಘಟನೆಯಲ್ಲಿ ವಿದ್ಯಾರ್ಥಿನಿಗೆ ಗಾಯಗಳಾಗಿದ್ದು, ಸ್ಥಳೀಯರ ಸಹಾಯದಿಂದ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಸಮಯೋಚಿತವಾಗಿ ಸ್ಪಂದಿಸಿದ ಉದಯ ಕುಮಾರ್ ಶೆಟ್ಟಿ ಅವರ ಧೈರ್ಯ, ಮಾನವೀಯತೆ ಮತ್ತು ಸಾಹಸಕ್ಕೆ ಸ್ಥಳೀಯರು ಹಾಗೂ ಸಾರ್ವಜನಿಕರು ವ್ಯಾಪಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಘಟನೆ ದೇರಂಬಳದಲ್ಲಿರುವ ತಾತ್ಕಾಲಿಕ ಅಡಿಕೆ ಮರದ ಸೇತುವೆಯ ಅಪಾಯಕಾರಿ ಸ್ಥಿತಿಯನ್ನು ಮತ್ತೊಮ್ಮೆ ಬಯಲಿಗೆಳೆದಿದೆ. ಮಳೆಗಾಲದಲ್ಲಿ ಇದೇ ಸೇತುವೆಯ ಮೂಲಕ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಮಹಿಳೆಯರು ಹಾಗೂ ಸಾರ್ವಜನಿಕರು ಜೀವಭಯದಲ್ಲೇ ಸಂಚರಿಸುತ್ತಿದ್ದಾರೆ.
ಸ್ಥಳೀಯರ ಪ್ರಕಾರ, ಈ ಸೇತುವೆಯ ದುರವಸ್ಥೆ ಕುರಿತು ಹಲವು ಬಾರಿ ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದರೂ ಶಾಶ್ವತ ಪರಿಹಾರ ದೊರೆತಿಲ್ಲ. ಸಂಭವಿಸಬಹುದಾದ ದೊಡ್ಡ ದುರಂತಗಳನ್ನು ತಪ್ಪಿಸಲು ತಕ್ಷಣವೇ ಸುರಕ್ಷಿತ ಸೇತುವೆ ನಿರ್ಮಾಣಕ್ಕೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.




