ಪದವಿ ಪೂರ್ವ ಕಾಲೇಜಿನ ಸಿಸಿ ಕ್ಯಾಮೆರಾ, ನೋಟಿಸ್ ಬೋರ್ಡ್ ಗೆ ಹಾನಿ
ಬೆಂ.ಗ್ರಾಮಂತರ: ಜಿಲ್ಲೆಯ ದೇವನಹಳ್ಳಿ ತಾಲೂಕಿನ ವಿಜಯಪುರದಲ್ಲಿ ಬೆಳಗ್ಗೆ ಸುಮಾರು 8:15 ಗೆ ಕಾಲೇಜಿನ ಬಳಿ ಬರುತ್ತಿದ್ದಂತೆ ಅಲ್ಲಿ ಕಟ್ಟಿದ್ದ ಬ್ಯಾನರ್ ಕಿತ್ತು ಹಾಕಿದ ದೃಶ್ಯ ಕಂಡು ಬಂದಿತು.
ನಂತರ ಹೂವಿನ ಕುಂಡಗಳು ಚೆಲ್ಲಾ ಪಿಲ್ಲಿಯಾಗಿ ಬಿದ್ದಿದ್ದವು. ಕಾಲೇಜಿನ ಬಳಿ ಹೋದಾಗ ಅನೇಕ ವಸ್ತುಗಳು ಹಾನಿಯಾಗಿದ್ದು ಗಮನಕ್ಕೆ ಬಂದು ಕಾಲೇಜಿನ ಆವರಣದ ಪರಿಸ್ಥಿತಿ ನೋಡಿ ಒಂದು ರೀತಿಯ ಗಾಬರಿಯಾಯಿತು ಎಂದು ವಿಜಯಪುರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎಲ್. ಎನ್. ಶಶಿಕುಮಾರ್ ತಿಳಿಸಿದರು.
ವಿಜಯಪುರ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ತಡರಾತ್ರಿ ನಡೆದ ಘಟನೆ ಬಗ್ಗೆ ಪೊಲೀಸರ ಬಳಿ ವಿವರ ಹೇಳುವ ಸಂದರ್ಭದಲ್ಲಿ ಮಾತನಾಡಿ, ನಿನ್ನೆ ಬುಧವಾರ ರಾತ್ರಿ ಕಿಡಿಗೇಡಿಗಳು ಕಾಲೇಜಿನ ಆವರಣದ ಮುಂದೆ ಇದ್ದ ಎರಡು ಸಿಸಿ ಕ್ಯಾಮೆರಾ ಗಳನ್ನು ಒಡೆದಿದ್ದಾರೆ. ನೋಟಿಸ್ ಬೋರ್ಡ್ ಗಾಜನ್ನು ಒಡೆದಿದ್ದಾರೆ. ಗೇಟ್ ಬಳಿ ಇದ್ದ ಹೂವಿನ ಕುಂಡಗಳನ್ನು ಛಿದ್ರಗೊಳಿಸಿದ್ದಾರೆ. ನೀರಿನ ಸಿಮೆಂಟ್ ತೊಟ್ಟಿ ಒಡೆದಿದ್ದಾರೆ. ಆವರಣದಲ್ಲಿ ಬೆಳೆಸಿದ್ದ ಗಿಡಗಳನ್ನು ಹಾನಿಗೊಳಿಸಿದ್ದಾರೆ.




