March 23, 2026

ಮುಂಬೈನಿಂದ ಬೆಂಗಳೂರಿಗೆ ಬರಬೇಕಾಗಿದ್ದ ವಿಮಾನಕ್ಕೆ ಹಕ್ಕಿ ಡಿಕ್ಕಿ: ಮುಂಬೈನಲ್ಲಿ ತುರ್ತು ಭೂಸ್ಪರ್ಶ

0
image_editor_output_image-861540966-1665837053330

ಮುಂಬೈ:  ಮುಂಬೈನಿಂದ ಪ್ರಯಾಣಿಕರನ್ನು ಹೊತ್ತು ಬೆಂಗಳೂರಿಗೆ ಸಂಚರಿಸುತ್ತಿದ್ದ ಆಕಾಸ ಏರ್ ಸಂಸ್ಥೆಯ ವಿಮಾನಕ್ಕೆ ಆಗಸದಲ್ಲಿ ಹಕ್ಕಿ ಢಿಕ್ಕಿ ಹೊಡೆದ ಪರಿಣಾಮ ಕೂಡಲೇ ಮುಂಬೈಗೆ ಹಿಂತಿರುಗಿ ತುರ್ತು ಭೂಸ್ಪರ್ಶ ಮಾಡಿದ ಘಟನೆ ಶನಿವಾರ ನಡೆದಿದೆ.

ಆಕಾಸ ಏರ್ ಸಂಸ್ಥೆಯ ವಿಮಾನವು ಬೆಂಗಳೂರಿಗೆ ಆಗಮಿಸುತ್ತಿತ್ತು. ಈ ವೇಳೆ ಹಕ್ಕಿ ಢಿಕ್ಕಿಯಾಗಿದ್ದು, ವಿಮಾನದ ಕ್ಯಾಬಿನ್‌ನಲ್ಲಿ ಸುಟ್ಟ ವಾಸನೆ ಬರಲಾರಂಭಿಸಿತ್ತು. ಕೂಡಲೇ ಎಚ್ಚೆತ್ತುಕೊಂಡ ಪೈಲಟ್ ಎಟಿಸಿ ಟವರ್‌ಗೆ ಮಾಹಿತಿ ನೀಡಿದರು. ಬಳಿಕ ವಿಮಾನವನ್ನು ಮತ್ತೆ ಮುಂಬೈಗೆ ನಿಲ್ದಾಣಕ್ಕೆ ಕೊಂಡೊಯ್ದು ಇಳಿಸಿದರು. ಘಟನೆ ನಡೆದ ವೇಳೆ ವಿಮಾನದಲ್ಲಿದ್ದ ಪ್ರಯಾಣಿಕರ ಸಂಖ್ಯೆ ಬಗ್ಗೆ ತಿಳಿದು ಬಂದಿಲ್ಲ. ಆದರೆ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯ ತಿಳಿಸಿರುವುದಾಗಿ ವರದಿಯಾಗಿದೆ.

ವಿಮಾನದ ಮೊದಲ ಎಂಜಿನ್‌ನಲ್ಲಿ ಹಕ್ಕಿ ಸತ್ತು ಬಿದ್ದಿರುವುದು ತಪಾಸಣೆ ವೇಳೆ ಪತ್ತೆಯಾಗಿದೆ. ಹಕ್ಕಿ ಢಿಕ್ಕಿಯಾದ ಕಾರಣ ಸುಟ್ಟ ವಾಸನೆ ಬಂದಿದೆ. ಆದರೆ ಯಾವುದೇ ತಾಂತ್ರಿಕ ದೋಷ ಎಂಜಿನ್‌ನಲ್ಲಿ ಕಂಡು ಬಂದಿಲ್ಲ ಎಂದು ಡಿಜಿಸಿಎ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆಕಾಸ ಏರ್ ಇದೇ ವರ್ಷ ಆಗಸ್ಟ್ 7ರಂದು ತನ್ನ ಕಾರ್ಯಾಚರಣೆಯನ್ನು ಆರಂಭಿಸಿತ್ತು.

Leave a Reply

Your email address will not be published. Required fields are marked *

error: Content is protected !!