ಎರಡು ಸಮುದಾಯಗಳ ನಡುವೆ ಕಲ್ಲು ತೂರಾಟ: ಓರ್ವ ಪೊಲೀಸ್ ಸೇರಿದಂತೆ ಆರು ಮಂದಿ ಗಾಯ
ಸುಲ್ತಾನ್ಪುರ: ಉತ್ತರ ಪ್ರದೇಶದ ಬಾಲ್ದಿರಾಯ್ ಪ್ರದೇಶದಲ್ಲಿ ಸೋಮವಾರ ಸಂಜೆ ಎರಡು ಸಮುದಾಯಗಳ ನಡುವೆ ನಡೆದ ಕಲ್ಲು ತೂರಾಟದಲ್ಲಿ ಓರ್ವ ಪೊಲೀಸ್ ಸೇರಿದಂತೆ ಆರು ಮಂದಿ ಗಾಯಗೊಂಡಿದ್ದಾರೆ.
ದುರ್ಗಾ ಮೂರ್ತಿ ವಿಸರ್ಜನೆ ಕಾರ್ಯಕ್ರಮದ ವೇಳೆ ಮಸೀದಿ ಸಮೀಪ ಸಂಗೀತ ಹಾಕಿದ ಕಾರಣಕ್ಕೆ ಎರಡು ಸಮುದಾಯಗಳ ನಡುವೆ ಮಾರಾಮಾರಿ ನಡೆದಿದೆ.
ದುರ್ಗಾ ಮಾತೆಯ ಮೂರ್ತಿ ವಿಸರ್ಜನೆಗೆ ಕೊಂಡೊಯ್ಯುವ ಸಂದರ್ಭ ಇಬ್ರಾಹಿಂಪುರ ಪ್ರದೇಶದಲ್ಲಿರುವ ಮಸೀದಿ ಸಮೀಪ ಸಾಗುತ್ತಿದ್ದಾಗ ಈ ದುರ್ಘಟನೆ ನಡೆದಿದೆ.
ಮಸೀದಿಯ ಆಜಾನ್ ಸಮಯದಲ್ಲೇ ಅಬ್ಬರ ಡಿಜೆ ಸಂಗೀತವನ್ನು ಹಾಕಿದ್ದರಿಂದ ಉಭಯ ಸಮುದಾಯಗಳ ನಡುವೆ ಗಲಾಟೆ ನಡೆದಿದೆ ಎಂದು ಬಾಲ್ದಿರಾಯ್ನ ಸರ್ಕಲ್ ಆಫೀಸರ್ ರಾಜಾರಾಮ್ ಚೌಧರಿ ಹೇಳಿದ್ದಾರೆ.
ಸಂಗೀತದ ಶಬ್ದವನ್ನು ಕಡಿಮೆಗೊಳಿಸುವಂತೆ ಕೇಳಿದಾಗ ವಾಗ್ವಾದ ನಡೆದಿದೆ. ಬಳಿಕ ಎರಡೂ ಸಮುದಾಯಗಳ ನಡುವೆ ಕಲ್ಲು ತೂರಾಟ ನಡೆದಿದೆ. ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರ ತಂಡ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.




