ಬೆಳ್ತಂಗಡಿ: ವಿದ್ಯುತ್ ಬಿಲ್ ಪಾವತಿಸದಕ್ಕೆ ಸಂಪರ್ಕ ಕಡಿತ: ಲೈನ್ಮ್ಯಾನ್ಗಳ ಮೇಲೆ ಹಲ್ಲೆ ಮಾಡಿದ ವ್ಯಕ್ತಿ
ಬೆಳ್ತಂಗಡಿ: ವಿದ್ಯುತ್ ಬಿಲ್ ಪಾವತಿಸದ ಕಾರಣಕ್ಕೆ ವ್ಯಕ್ತಿಯೋರ್ವ ಸಂಪರ್ಕ ಕಡಿತಗೊಳಿಸಿದ ಲೈನ್ಮ್ಯಾನ್ಗಳ ಮೇಲೆ ಗಂಭೀರವಾಗಿ ದಾಳಿ ನಡೆಸಿದ ಘಟನೆ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಜಂಕ್ಷನ್ ನಲ್ಲಿ ಗುರುವಾರ ರಾತ್ರಿ ಸಂಭವಿಸಿದೆ.
ಹತ್ಯಡ್ಕ ಗ್ರಾಮದ ಅಡ್ಕಾಡಿ ನಿವಾಸಿ ರಿಜೀಶ್ (38) ಹಲ್ಲೆ ನಡೆಸಿದಾತ. ಘಟನೆಯಲ್ಲಿ ಮೆಸ್ಕಾಂ ಪವರ್ ಮ್ಯಾನ್ ದುಂಡಪ್ಪ ಅವರ ತಲೆಗೆ ಗಂಭೀರ ಗಾಯವಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಇನ್ನೋರ್ವ ಪವರ್ಮ್ಯಾನ್ ಉಮೇಶ್ಗೆ ಕೂಡಾ ಗಾಯಗಳಾಗಿವೆ. ಹತ್ಯಡ್ಕ ಗ್ರಾಮದ ಅಡ್ಕಾಡಿ ನಿವಾಸಿ ದಿ. ಕಾಂತು ಪೂಜಾರಿ ಎಂಬುವವರ ಹೆಸರಿನ ವಿದ್ಯುತ್ ಶುಲ್ಕ 3530 ಬಂದಿದ್ದು ಇದನ್ನು ಕಟ್ಟದ ಹಿನ್ನೆಲೆ ಸೆಪ್ಟೆಂಬರ್ 19ರಂದು ಮಧ್ಯಾಹ್ನ ಪವರ್ ಮ್ಯಾನ್ ಉಮೇಶ್ ದಿ. ಕಾಂತು ಪೂಜಾರಿ ಅವರ ಮನೆಗೆ ತೆರಳಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ.
ಈ ಸಂದರ್ಭ ಅವರ ಮನೆ ಅಳಿಯ ಮನೆಯಲ್ಲಿ ಇರಲಿಲ್ಲ. ಗೂಡ್ಸ್ ಲಾರಿ ಚಾಲಕರಾಗಿರುವ ರಿಜೀಶ್ ನಿಗೆ ಮನೆಯವರು ಫೋನ್ ಮಾಡಿ ಪವರ್ ಮ್ಯಾನ್ ಗೆ ಮಾತನಾಡಲು ಹೇಳಿದ್ದಾರೆ. ಫೋನಿನಲ್ಲಿ ಪವರ್ ಮ್ಯಾನ್ ಉಮೇಶ್ ರವರಿಗೆ ಕೊಲೆ ಬೆದರಿಕೆ ಹಾಕಿದ್ದಾನೆ. ಈ ಬಗ್ಗೆ ಉಮೇಶ್ ಮೇಲಾಧಿಕಾರಿಗಳಿಗೆ ತಿಳಿಸಿದ್ದು ಕೊಕ್ಕಡ ಜೆಇ ಕೃಷ್ಣೇಗೌಡ ಪರಿಶೀಲಿಸುವುದಾಗಿ ತಿಳಿಸಿದ್ದಾರೆ.
ಗುರುವಾರ ಸಂಜೆ ಕರ್ತವ್ಯ ಮುಗಿಸಿ ರಾತ್ರಿ ಕೊಕ್ಕಡ ಜಂಕ್ಷನ್ ನಲ್ಲಿ ಉಮೇಶ್ ಹಾಗೂ ಅವರ ಸಹೋದ್ಯೋಗಿಗಳು ದಿನಸಿ ಸಾಮಗ್ರಿಗಳನ್ನು ಖರೀದಿಸುವ ವೇಳೆ ಲಾರಿ ಚಾಲಕರಾಗಿರುವ ರಿಜಿಶ್ ಉಮೇಶ್ ಯಾರೆಂದು ಪ್ರಶ್ನಿಸಿದ್ದಾರೆ.
ಈ ಸಂದರ್ಭ ಸ್ಥಳದಲ್ಲಿಯೇ ಇದ್ದ ಉಮೇಶ್ ತಾನೇ ಎಂದು ಪರಿಚಯಿಸಿಕೊಂಡಿದ್ದಾರೆ. ಈ ಸಂದರ್ಭ ಸ್ಥಳದಲ್ಲಿ ಅವಾಚ್ಯ ಶಬ್ದಗಳಿಂದ ಉಮೇಶ್ ರನ್ನು ನಿಂದಿಸಿ ಹಲ್ಲೆಗೆ ರಿಜೀಶ್ ಮುಂದಾದರು.
ಈ ಸಂದರ್ಭ ಸಹೋದ್ಯೋಗಿಯಾದ ಉಪ್ಪಾರಪಳಿಕೆಯ ಪವರ್ ಮ್ಯಾನ್ ದುಂಡಪ್ಪ ಮಧ್ಯಪ್ರವೇಶಿಸಿ ಮಾತುಕತೆ ನಡೆಸಿ ಸಮಾಧಾನಿಸಿದ್ದಾರೆ.
ಪರಿಸ್ಥಿತಿ ಶಾಂತಗೊಳಿಸಿ, ತೆರಳುವಾಗ ಪಕ್ಕದಲ್ಲಿ ಇದ್ದ ಸೋಡಾ ಬಾಟಲಿಯಿಂದ ರಿಜೀಶ್ ದುಂಡಪ್ಪ ಅವರ ತಲೆಗೆ ಬಲವಾಗಿ ಹೊಡೆದಿದ್ದಾರೆ. ಈ ಸಂದರ್ಭದಲ್ಲಿ ಗಂಭೀರ ಗಾಯಗೊಂಡ ಅವರನ್ನು ಬೆಳ್ತಂಗಡಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ಧರ್ಮಸ್ಥಳ ಪೊಲೀಸ್ ಠಾಣಾ ಸಿಬ್ಬಂದಿಗಳು ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ, ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.




