ಬೆಳ್ತಂಗಡಿ: ಅಂಗಡಿಯಿಂದ ಅಡಿಕೆ ಕಳ್ಳತನ ಪ್ರಕರಣ: ಆರೋಪಿ ಸಂತೋಷ್ ಬಂಧನ, ಕಳ್ಳತನ ಮಾಡಿದ ಅಡಿಕೆ ವಶಕ್ಕೆ
ಬೆಳ್ತಂಗಡಿ : ಕಳ್ಳತನ ಪ್ರಕರಣಗಳು ಬೆಳ್ತಂಗಡಿ ತಾಲೂಕಿನಲ್ಲಿ ದಿನೇ ದಿನೇ ಜಾಸ್ತಿಯಾಗುತ್ತಿದ್ದು ಆರೋಪಿಗಳ ಬಗ್ಗೆ ಸುಳಿವು ಸಿಗದೆ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿತ್ತು ಇದೀಗ ಒಂದು ಕಳ್ಳತನ ಪ್ರಕರಣವನ್ನು ಭೇದಿಸಿ ಕಳ್ಳತನ ಮಾಡಿದ ಅಡಿಕೆ ಸಮೇತ ಒಬ್ಬ ಆರೋಪಿಯನ್ನು ಹೆಡೆಮುರಿ ಕಟ್ಟುವಲ್ಲಿ ಬೆಳ್ತಂಗಡಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬೆಳ್ತಂಗಡಿ ಬಸ್ ನಿಲ್ದಾಣದ ಪಕ್ಕದಲ್ಲಿರುವ ನಗರದ ಪಂಚಾಯತ್ ನೀರಿನ ಟ್ಯಾಂಕ್ ಹೋಗುವ ರಸ್ತೆಯಲ್ಲಿರುವ ಸವಣಾಲು ನಿವಾಸಿ ಜಗದೀಶ್ ಗೌಡ ಮಾಲೀಕತ್ವದ ಶ್ರೀ ದುರ್ಗಾ ಸುಪಾರಿ ಟ್ರೇಡರ್ಸ್ ಎಂಬ ಹೆಸರಿನ ಅಂಗಡಿಯಿಂದ ಸೆಪ್ಟೆಂಬರ್ 17 ಶನಿವಾರದಂದು ಸಂಜೆ ಅಂಗಡಿಗೆ ಬೀಗ ಹಾಕಿ ಹೋಗಿದ್ದರು . ಸೋಮವಾರ ಎಂದಿನಂತೆ ಅಂಗಡಿಯನ್ನು ತೆರೆದು ಎಂದಿನಂತೆ ಅಡಿಕೆ ಲೋಡ್ ಮಾಡಲು ಹೋದಾಗ ಅಂಗಡಿಯ ಮೇಲ್ಬಾಗದ ಸಿಮೆಂಟ್ ಶೀಟ್ ಜಾರಿದ್ದು ಕಂಡಿದೆ. ಸುತ್ತಮುತ್ತ ಪರಿಶೀಲನೆ ನಡೆಸಿದಾಗ ಹಿಂಭಾಗದಲ್ಲಿ ಕಳ್ಳತನ ಮಾಡಿ ಬಿಟ್ಟು ಹೋದ ಮೂರು ಕಬ್ಬಿಣದ ಏಣಿ ಪತ್ತೆಯಾಗಿತ್ತು. ನಂತರ ಅಡಿಕೆ ಪರಿಶೀಲನೆ ನಡೆಸಿದಾಗ ಅಡಿಕೆ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ತಕ್ಷಣ ಮಾಲೀಕರು ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅದರಂತೆ ಪೊಲೀಸರು ಐಪಿಸಿ 454, 457,380 ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು.
ಬೆಳ್ತಂಗಡಿ ಪೊಲೀಸರು ಪ್ರಕರಣದ ಬಗ್ಗೆ ತನಿಖೆ ನಡೆಸಿ ಆರೋಪಿ ಬೆಳ್ತಂಗಡಿ ನಗರದ ಸುದೆಮುಗೇರು ನಿವಾಸಿ ಫೈಬರ್ ಉದ್ಯಮ ಮಾಡುತ್ತಿರುವ ಸಂತೋಷ್ ಕುಮಾರ್ @ ಸಂತು(28) ಎಂಬಾತನನ್ನು ಗುರುವಾರ ಸಂಜೆ ಬಂಧಿಸಿ ಆತ ಕಳ್ಳತನ ಮಾಡಿ ಏಳು ಗೋಣಿಯಲ್ಲಿ ಬಚ್ಚಿಟ್ಟಿದ್ದ ಸುಮಾರು ಎಪ್ಪತ್ತು ಸಾವಿರ ಮೌಲ್ಯದ ಒಂದು ಕ್ವಿಂಟಾಲ್ ಐವತ್ತು ಕೆಜಿ ಸುಲಿದ ಅಡಿಕೆಯನ್ನು ವಶಪಡಿಸಿಕೊಂಡಿದ್ದಾರೆ ಮತ್ತು ಕಳ್ಳತನಕ್ಕೆ ಉಪಯೋಗಿಸಿದ KA-70-H-9084 ನಂಬರಿನ ಡಿಯೋ ಸ್ಕೂಟರ್ ವಾಹನವನ್ನು ವಶಕ್ಕೆ ಪಡೆದಿದ್ದಾರೆ.
ಆರೋಪಿ ಪತ್ತೆಗೆ ಕಳ್ಳತನವಾದ ಅಂಗಡಿಯವರಿಂದ ಸಹಾಯ: ಬೆಳ್ತಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದರು. ಈ ವೇಳೆ ಪೊಲೀಸರು ಸಲಹೆಯಂತೆ ಕಳ್ಳತನ ನಡೆದ ಅಂಗಡಿಯವರು ಸೇರಿ ಬೆಳ್ತಂಗಡಿಯ ಎಲ್ಲಾ ವೆಲ್ಲಿಂಗ್ ಅಂಗಡಿಗೆ ಹೋಗಿ ವಿಚಾರಿಸಿದಾಗ ಅಯ್ಯಪ್ಪ ಗುಡಿ ಹಿಂಭಾಗದ ಒಂದು ಶಾಪ್ ನಲ್ಲಿ ಒಂದು ಏಣಿ ಪತ್ತೆಯಾಗಿತ್ತು. ಇದರ ಬಗ್ಗೆ ವಿಚಾರಿಸಿದಾಗ ತಯಾರಿಸಲು ನೀಡಿದ ವ್ಯಕ್ತಿಯ ಮೊಬೈಲ್ ಸಂಖ್ಯೆ ನೀಡಿದ್ದರು. ಇದನ್ನು ಪರಿಶೀಲನೆ ಮಾಡಿದಾಗ ಕಳ್ಳತನ ಬಗ್ಗೆ ಮಾಹಿತಿ ಸಿಕ್ಕಿದೆ. ತಕ್ಷಣ ಆತನ ಸಂಚಾರದ ಬಗ್ಗೆ ಮಾಹಿತಿ ಕಲೆ ಹಾಕಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು.
ಆರೋಪಿಯ ಪತ್ತೆ ಕಾರ್ಯಾಚರಣೆಯಲ್ಲಿ ಬೆಳ್ತಂಗಡಿ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಅರ್ಜುನ್ ನೇತ್ರತ್ವದ ಎಎಸ್ಐ ದೇವಪ್ಪ, ಎಎಸ್ಐ ತಿಲಕ್ ರಾಜ್ ಮತ್ತು ಸಿಬ್ಬಂದಿ ಚರಣ್, ಶಶಿ ಕುಮಾರ್, ಶಿವಕುಮಾರ್ ಸಿಂಗಾರಿ, ನಾಗರಾಜ್, ವಾಹನ ಚಾಲಕ ಸತೀಶ್ ಮತ್ತಿತರರು ಭಾಗವಹಿಸಿದರು.




