ಡೀಸೆಲ್ ಟ್ಯಾಂಕರ್ ಹರಿದು ಕುರಿಗಾಹಿ ಸೇರಿದಂತೆ 18 ಕುರಿಗಳು ಸಾವು
ಕುಷ್ಟಗಿ: ಬೆಳಗಿನ ಜಾವ ಡೀಸಲ್ ಟ್ಯಾಂಕರ್ ಹರಿದು ವಲಸೆ ಕುರಿಗಾಹಿ ಸೇರಿದಂತೆ 18 ಕುರಿಗಳು ಮೃತಪಟ್ಟಿರುವ ಘಟನೆ ಕುಷ್ಟಗಿ ತಾಲೂಕಿನ ನಿಡಶೇಸಿ ಕೆರೆಯ ಗಾರ್ಡನ್ ಬಳಿ ಸಂಭವಿಸಿದೆ.
ಕುರಿಗಾಹಿ ಯಲ್ಲಪ್ಪ ಬಸಪ್ಪ ಚಿಗರಿ(45) ಮೃತ ದುರ್ದೈವಿ. ವಲಸೆ ಕುರಿಗಾಹಿಗಳು ಗಂಗಾವತಿಯಿಂದ ಹುಬ್ಬಳ್ಳಿ ಕಡೆ ಕುಷ್ಟಗಿ ಮೂಲಕ ಗಜೇಂದ್ರಗಡ ರಸ್ತೆಯಲ್ಲಿ ಹೊರಟಿದ್ದರು. ಶನಿವಾರ ಬೆಳಗಿನ ಜಾವ ನಿಡಶೇಸಿ ಕೆರೆ ಪ್ರದೇಶದ ಗಾರ್ಡನ್ ಬಳಿ ಡೀಸಲ್ ಟ್ಯಾಂಕರ್ ಚಾಲಕನ ನಿರ್ಲಕ್ಷ ಚಾಲನೆಯಿಂದ ಕುರಿಗಳ ಮೇಲೆ ಲಾರಿ ಹರಿದಿದ್ದು 18 ಕುರಿಗಳು ಲಾರಿ ಚಕ್ರಕ್ಕೆ ಸಿಲುಕಿ ಸಾವನ್ನಪ್ಪಿದ್ದು ರಸ್ತೆ ರಕ್ತಸಿಕ್ತವಾಗಿದೆ.
ಟ್ಯಾಂಕರ್ ಚಾಲಕ ಪೊಲೀಸರಿಗೆ ಶರಣಾಗಿದ್ದು, ಎದುರಿನ ವಾಹನ ಫೋಕಸ್ ಲೈಟ್ ಬೆಳಕಿಗೆ ಕುರಿ ಮಂದೆ ಕಾಣಲಿಲ್ಲ ಎಂದು ವಿಚಾರಣೆಯಲ್ಲಿ ತಿಳಿಸಿದ್ದಾನೆ. ಘಟನಾ ಸ್ಥಳಕ್ಕೆ ಸಿಪಿಐ ನಿಂಗಪ್ಪ ರುದ್ರಪ್ಪಗೋಳ, ಪಿಎಸೈ ಮೌನೇಶ ರಾಠೋಡ್ ಭೇಟಿ ನೀಡಿ ಪರಿಶೀಲಿಸಿದ್ದಾರೆ ಪ್ರಕರಣ ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.




