ಸುಳ್ಯ: ತಲ್ವಾರ್ ಹಿಡಿದು ಓಡಾಡಿದ ಯುವಕನ ಬಂಧನ, ಪ್ರಕರಣ ದಾಖಲು
ಸುಳ್ಯ: ತಾಲ್ಲೂಕಿನ ಕನಕಮಜಲು ಗ್ರಾಮದ ಸುಣ್ಣಮೂಲೆ ಬಳಿ ತಲ್ವಾರ್ ಹಿಡಿದು ಓಡಾಡಿದ ಯುವಕನನ್ನು ಸುಳ್ಯ ಪೊಲೀಸರು ಬಂಧಿಸಿದ್ದು, ಆತನ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಸಂದೀಪ್ ಎಂಬ ಯುವಕ ತಲವಾರು ಹಿಡಿದುಕೊಂಡು ಹೋಗುತ್ತಿದ್ದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದನ್ನು ಗಮನಿಸಿದ ಸಂದೀಪ್ ನನ್ನು ಸುಳ್ಯ ಪೊಲೀಸರು ಬಂಧಿಸಿದ್ದು ಸುಮೊಟೋ ಪ್ರಕರಣ ದಾಖಲಿಸಿದ್ದಾರೆ.
ಸಂದೀಪ್ ವಿಪರೀತ ಮದ್ಯ ಸೇವನೆಯ ಚಟ ಹೊಂದಿದ್ದು, ಕಳೆದ 8 ತಿಂಗಳಿನಿಂದ ಮದ್ಯಪಾನ ಸೇವನೆ ನಿಲ್ಲಿಸಿದ್ದು, ನಿನ್ನೆಯ ದಿನ ಮದ್ಯಪಾನ ವಾಪಾಸು ಆರಂಭಿಸಿದ ಹಿನ್ನೆಲೆಯಲ್ಲಿ ಮಾನಸಿಕ ಸ್ಥಿರತೆ ಕಳೆದುಕೊಂಡು ಈ ರೀತಿ ವರ್ತಿಸಿದ್ದಾನೆ ಎಂದು ತಿಳಿದುಬಂದಿದೆ.
ಜನರು ಯಾವುದೇ ಭಯಭೀತರಾಗುವುದು ಬೇಡ ಎಂದು ಸುಳ್ಯ ಪೊಲೀಸ್ ತಿಳಿಸಿದ್ದಾರೆ.
ಇತ್ತೀಚೆಗೆ ಕೊಲೆಯಾದ ಪ್ರವೀಣ್ ನೆಟ್ಟಾರು ಅವರಿಗೆ ಶ್ರದ್ದಾಂಜಲಿ ಸಲ್ಲಿಸುವ ಕುರಿತ ಬ್ಯಾನರ್ ಅಳವಡಿಸಿಲು ಕನಕಮಜಲು ಪೇಟೆಯಲ್ಲಿ ಅನುಮತಿ ನೀಡಿಲ್ಲ ಎಂಬ ಕಾರಣಕ್ಕೆ ಕೋಪಗೊಂಡು ಈತ ತಲ್ವಾರ್ ಹಿಡಿದು ನಡೆದಾಡುತ್ತಿದ್ದ ಎಂದು ಹೇಳಲಾಗಿದೆ.
ಈ ಬಗ್ಗೆ ಕನಕಮಜಲು ಗ್ರಾಮ ಪಂಚಾಯಿತಿ ಅವರನ್ನು ಸಂಪರ್ಕಿಸಿದಾಗ, ‘ ಪ್ಲೆಕ್ಸ್ ಬ್ಯಾನರ್ ಅಳವಡಿಸುವ ವಿಷಯವಾಗಿ ಅನುಮತಿಗಾಗಿ ನಮ್ಮಲ್ಲಿಗೆ ಯಾರೂ ಬಂದಿಲ್ಲ. ಬಟ್ಟೆ ಬ್ಯಾನರ್ ಹಾಕಲು ನಾವು ಅನುಮತಿ ನೀಡಿದ್ದೇವೆ’ ಎಂದು ಗ್ರಾ.ಪಂ. ಅಧ್ಯಕ್ಷ ಶ್ರೀಧರ ಕುತ್ಯಾಳ ಹಾಗೂ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಸರೋಜಿನಿ ತಿಳಿಸಿದ್ದಾರೆ.
ಘಟನೆಯ ಗಂಭೀರತೆ ಅರಿತ ಪೊಲೀಸರು ಸ್ಥಳಕ್ಕೆ ಧಾವಿಸಿ ತಲವಾರು ವಶಪಡಿಸಿದ್ದಾರೆ.




