ಮಳೆ ನೀರಿನಲ್ಲಿ ಕೊಚ್ಚಿ ಹೋಗಿದ್ದ ಮಿಥಿನ್ ಮೃತದೇಹ ಕೆ.ಆರ್.ಪುರಂನ ರಾಜಕಾಲುವೆಯಲ್ಲಿ ಪತ್ತೆ
ಬೆಂಗಳೂರು: ಮಳೆ ನೀರಿನಲ್ಲಿ ಕೊಚ್ಚಿ ಹೋಗಿದ್ದ ಮಿಥಿನ್ ಮೃತದೇಹ ಇಂದು (ಜೂನ್ 19) ನಗರದ ಕೆ.ಆರ್.ಪುರಂನ ರಾಜಕಾಲುವೆಯಲ್ಲಿ ಪತ್ತೆಯಾಗಿದೆ.
48 ಗಂಟೆಗಳ ಬಳಿಕ ಮೃತದೇಹ ಪತ್ತೆಯಾಗಿದ್ದು, ಎಸ್ಡಿಆರ್ಎಫ್ ಸಿಬ್ಬಂದಿ ರಾಜಕಾಲುವೆಯಿಂದ ಶವವನ್ನು ಹೊರತೆಗೆದಿದೆ. ಕೇಂಬ್ರಿಡ್ಜ್ ಕಾಲೇಜು ಪಕ್ಕದ ರಾಜಕಾಲುವೆಯಲ್ಲಿ ಶವ ಸಿಕ್ಕಿ ಹಾಕಿಕೊಂಡಿತ್ತು. ಘಟನಾ ಸ್ಥಳದಿಂದ ಸುಮಾರು 1.5 ಕಿ.ಮೀ ದೂರದಲ್ಲಿ ಮೃತದೇಹ ಸಿಕ್ಕಿದೆ. ಮಿಥಿನ್ ದೇಹ ಸದ್ಯ ಈಸ್ಟ್ ಪಾಯಿಂಟ್ ಆಸ್ಪತ್ರೆಯಲ್ಲಿದೆ. 1 ಗಂಟೆ ಒಳಗೆ ಮೃತದೇಹ ಕೊಡುತ್ತೇವೆ ಎಂದು ಆಸ್ಪತ್ರೆ ಸಿಬ್ಬಂದಿ ತಿಳಿಸಿದ್ದಾರೆಂದು ಮಿಥಿನ್ ಸೋದರ ಮಾವ ಮಂಜುನಾಥ್ ತಿಳಿಸಿದರು.
ಬೆಂಗಳೂರಿನಲ್ಲಿ ಸಿವಿಲ್ ಇಂಜಿನಿಯರ್ ಆಗಿ ಕೆಲಸ ಮಾಡಿಕೊಂಡಿದ್ದ ಯುವಕ ಮಿಥಿನ್ ನಿನ್ನೆ ತಡರಾತ್ರಿ12.30 ರ ಸುಮಾರಿಗೆ ರಾಜಕಾಲುವೆಯಲ್ಲಿ ಕೊಚ್ಚಿ ಹೋಗಿದ್ದು, ಮಳೆ ಹಿನ್ನೆಲೆ ಎಸ್ಡಿಆರ್ಎಫ್ ಸಿಬ್ಬಂದಿ ನಿನ್ನೆ ರಾತ್ರಿ ಶೋಧಕಾರ್ಯ ನಿಲ್ಲಿಸಿದ್ದರು. ಇಂದು ಬೆಳಿಗ್ಗೆಯಿಂದ ಮತ್ತೆ ಕಾರ್ಯಾಚರಣೆ ಮುಂದುವರೆಸಿದ್ದರು.
ಮೃತ ಮಿಥುನ್ ಸಾಗರ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಅದರಂತೆ ಗ್ರಾಮದ ನಿವಾಸಿ. ಮಿಥುನ್ ಸಾವಿನ ಸುದ್ದಿ ಕೇಳಿದ ಕುಟುಂಬಸ್ಥರು ಕಂಗಾಲಾಗಿದ್ದಾರೆ.




