ಊಟಕ್ಕೆ ಚಿಕನ್ ಮಾಡಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಪತ್ನಿಯ ಬರ್ಬರ ಹತ್ಯೆ
ದಾವಣಗೆರೆ: ಒಂದು ಮದುವೆಯಾದರೂ, ಮೊದಲನೇ ಹೆಂಡತಿಗೆ ಮಕ್ಕಳಾಗಿಲ್ಲ ಎಂದು ಮತ್ತೊಂದು ಯುವತಿಯನ್ನು ಪ್ರೀತಿಸಿ ಮದುವೆಯಾದ. ಮಗು ಆದ ನಂತರ ಎರಡನೇ ಮದುವೆಯ ವಿಷಯ ಗೊತ್ತಾಗಿದೆ. ಆಗಿನಿಂದ ಸಣ್ಣಪುಟ್ಟ ಗಲಾಟೆಗಳು ನಡೆಯುತ್ತಿದ್ದು, ಕಳೆದ ರಾತ್ರಿ ಊಟಕ್ಕೆ ಚಿಕನ್ ಮಾಡಿಲ್ಲ ಎನ್ನುವ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿ ಪತ್ನಿಯನ್ನು ಪತಿ ಬರ್ಬರವಾಗಿ ಕೊಲೆ ಮಾಡಿದ್ದಾನೆ.
ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ಬನ್ನಿ ಕೋಡು ಗ್ರಾಮದಲ್ಲಿ ನಡೆದ ಘಟನೆ. ಗಂಡ ಹೆಂಡತಿಯ ನಡುವೆ ಚಿಕನ್ ಊಟದ ವಿಚಾರವಾಗಿ ಜಗಳ ತಾರಕಕ್ಕೇರಿ ತನ್ನಪತ್ನಿಯನ್ನೇ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ ಘಟನೆ ನಡೆದಿದೆ. ಶೀಲಾ ಮೃತ ದುರ್ಧೈವಿ. ಬನ್ನಿಕೋಡು ಗ್ರಾಮದ ರೋಡ್ ರೋಲರ್ ಅಪರೇಟರ್ ಆಗಿದ್ದ ಕೆಂಚಪ್ಪನ ಜೊತೆ 9 ವರ್ಷಗಳ ಹಿಂದೆ ಮದುವೆಯಾಗಿತ್ತು.
ಹರಿಹರ ತಾಲೂಕಿನ ವಾಸನ ಗ್ರಾಮದ ಶೀಲಾಳನ್ನು ಕೆಂಚಪ್ಪ ಪ್ರೀತಿಸಿ ಮನೆಯವರು ವಿರೋಧದ ನಡುವೆ ಮದುವೆಯಾಗಿದ್ದ. ಈ ಹಿನ್ನಲೆ ಮನೆಯಿಂದ ಓಡಿ ಬಂದು ದೇವಸ್ಥಾನದಲ್ಲಿ ಮದುವೆಯಾಗಿದ್ದರು, ಹೇಗೋ ಸುಖವಾಗಿ ಸಂಸಾರ ಮಾಡಿ ಒಂದು ಮುದ್ದಾದ ಮಗುವನ್ನು ಪಡೆದಿದ್ದರು, ಆಗ ಕೆಂಚಪ್ಪನ ಅಸಲಿ ಸತ್ಯ ಗೊತ್ತಾಗಿದೆ. ಕೆಂಚಪ್ಪನಿಗೆ ಈಗಾಗಲೇ ಮದುವೆ ಯಾಗಿದ್ದು, ಆಕೆಗೆ ಮಕ್ಕಳಿಲ್ಲ ಎನ್ನುವ ಕಾರಣಕ್ಕೆ ತನ್ನನ್ನು ಮದುವೆಯಾಗಿರುವುದು ಶೀಲಾಳಿಗೆ ಗೊತ್ತಾಗಿದೆ. ಅಂದಿನಿಂದ ಗಂಡ ಹೆಂಡತಿ ನಡುವೆ ಪ್ರತಿನಿತ್ಯ ಒಂದಿಲ್ಲೊಂದು ಕಾರಣಕ್ಕೆ ಜಗಳ ಶುರುವಾಗಿದೆ. ಕೆಂಚಪ್ಪ ಕೂಡ ಮದ್ಯ ಸೇವನೆ ಮಾಡಿ ಬಂದು ಮನೆಯಲ್ಲಿ ರಾದ್ದಾಂತ ಮಾಡುತ್ತಿದ್ದ, ಇದು ಎರಡು ಮನೆಯವರಿಗೆ ಗೊತ್ತಾಗಿ ರಾಜೀ ಪಂಚಾಯತಿ ಮಾಡಿ ಹೋಗಿದ್ದರು.
ಆದರೆ ಕಳೆದ ರಾತ್ರಿ ಮದ್ಯ ಸೇವನೆ ಮಾಡಿ ಬಂದ ಕೆಂಚಪ್ಪ ಹೆಂಡತಿಗೆ ಚಿಕನ್ ಅಡುಗೆ ಮಾಡಿಲ್ಲ ಎಂದು ಜಗಳವಾಡಿ ಕೊನೆಗೆ ಚಾಕುವಿನಿಂದ ಹಿರಿದು ಕೊಲೆ ಮಾಡಿದ್ದಾನೆ. ಒಂದು ಮಗು ಆಗುವವರೆಗು ಚೆನ್ನಾಗಿದ್ದ ಕೆಂಚಪ್ಪ ನಂತರ ನಿತ್ಯ ಕುಡಿದು ಬಂದು ಜಗಳವಾಡುತ್ತಿದ್ದ. ಇದರಿಂದ ಶೀಲಾ ತನ್ನ 4 ವರ್ಷದ ಮಗಳನ್ನು ತಾಯಿ ಮನೆಯಲ್ಲಿಯೇ ಬಿಟ್ಟಿದ್ದಳು, ಅಲ್ಲದೆ ಕಳೆದ 7 ರಂದು ಮಗಳ ಹುಟ್ಟುಹಬ್ಬವನ್ನು ತವರು ಮನೆಯಲ್ಲಿಯೇ ಆಚರಣೆ ಮಾಡಿ ಬುಧವಾರ ಬಂದಿದ್ದರು, ಹುಟ್ಟು ಹಬ್ಬಕ್ಕೂ ಕೂಡ ಕೆಂಚಪ್ಪ ಹೋಗಿರಲಿಲ್ಲ. ತವರಿನಿಂದ ವಾಪಸ್ಸು ಬಂದ ನಂತರ ಮತ್ತೆ ಜಗಳವಾಡಿದ್ದ, ಅಲ್ಲದೆ ಸಂಜೆ ಬರುವುದರೊಳಗೆ ಚಿಕನ್ ಮಾಡು ಎಂದು ಹೇಳಿ ಹೋಗಿದ್ದಾನೆ.
ರಾತ್ರಿ ಮದ್ಯ ಸೇವನೆ ಮಾಡಿ ಬಂದ ಕೆಂಚಪ್ಪ ಶೀಲಾಳ ಜೊತೆ ಜಗಳವಾಡಿ ಚಾಕುವಿನಿಂದ ಹಿರಿದು ಕೊಲೆ ಮಾಡಿ ಪರಾರಿಯಾಗಿದ್ದಾನೆ. ಕೊಲೆ ಸಂಬಂಧ ಹರಿಹರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೊಲೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.




