ಮೈಸೂರು ಮೂಲದ ಮಹಿಳೆ ಉಳ್ಳಾಲದಲ್ಲಿ ಸಮುದ್ರ ಪಾಲು
ಉಳ್ಳಾಲ: ಕುಟುಂಬದ ಜೊತೆ ಸಮುದ್ರ ತೀರಕ್ಕೆಂದು ತೆರಳಿದ್ದ ಮಹಿಳೆ ಸಮುದ್ರ ಪಾಲಾದ ಘಟನೆ ಉಳ್ಳಾಲ ಸಮುದ್ರ ತೀರದಲ್ಲಿ ನಡೆದಿದೆ. ಮೈಸೂರು ಮೂಲದ ಭಾಗ್ಯಲಕ್ಷ್ಮಿ ಅಲೆಗೆ ಸಿಲುಕಿ ಸಮುದ್ರ ಪಾಲಾದವರು.
ಭಾಗ್ಯಲಕ್ಷ್ಮಿ ಅವರು ಪತಿ, ಮೂವರು ಪುತ್ರಿಯರು ಹಾಗೂ ಮೊಮ್ಮಗಳೊಂದಿಗೆ ಮೈಸೂರಿನಿಂದ ಮಂಗಳೂರಿಗೆ ಪ್ರವಾಸಕ್ಕೆಂದು ಬಂದಿದ್ದರು. ಪಂಪ್ವೆಲ್ ಬಳಿ ರೂಂನಲ್ಲಿ ತಂಗಿದ್ದ ಕುಟುಂಬ ಶನಿವಾರ ಬೆಳಗ್ಗೆ ಸೋಮೇಶ್ವರ ದೇವಳದಲ್ಲಿ ಪೂಜೆ ಸಲ್ಲಿಸಿ ಉಳ್ಳಾಲದ ಸಮುದ್ರಕ್ಕೆ ವಿಹಾರಕ್ಕೆಂದು ತೆರಳಿದ್ದರು. ಈ ವೇಳೆ ಭಾಗ್ಯಲಕ್ಷ್ಮಿ ಅಲೆಗೆ ಸಿಲುಕಿ ಸಮುದ್ರ ಪಾಲಾಗಿದ್ದಾರೆ. ಅವರೊಂದಿಗೆ ಬಂದಿದ್ದ ಪತಿ, ಮಕ್ಕಳು ಕೂಡಲೇ ಕಿರುಚಲು ಆರಂಭಿಸಿದಾಗ ಸಮೀಪದಲ್ಲೇ ಇದ್ದ ಶಿವಾಜಿ ಜೀವರಕ್ಷಕ ದಳದ ಸದಸ್ಯರು ಆಗಮಿಸಿ ಮಹಿಳೆಯನ್ನು ಮೇಲಕ್ಕೆತ್ತಿದರು. ಆದರೆ ಈ ವೇಳೆಗಾಗಲೇ ಮಹಿಳೆ ಸಾವನ್ನಪ್ಪಿದ್ದರು. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




