ಸಂತೋಷ್ ಆತ್ಮಹತ್ಯೆ ಪ್ರಕರಣ ತನಿಖೆ ನಡೆಸಲು 7 ತಂಡಗಳ ಆಯೋಜನೆ’: ಎಡಿಜಿಪಿ ಪ್ರತಾಪ್ ರೆಡ್ಡಿ
ಉಡುಪಿ: ಸಂತೋಷ್ ಪಾಟೀಲ್ ಪ್ರಕರಣದಲ್ಲಿ ನಿರ್ದೇಶನಗಳನ್ನು ನೀಡಲು ಬಂದಿದ್ದೇನೆ. ಏಳು ತನಿಖಾ ತಂಡಗಳನ್ನು ಮಾಡಿ ರಾಜ್ಯದ ವಿವಿಧ ಭಾಗಗಳಿಗೆ ಕಳುಹಿಸಲಾಗಿದೆ. ತನಿಖೆಯನ್ನು ಸಮರ್ಪಕವಾದ ರೀತಿಯಲ್ಲಿ ಮಾಡಲಾಗುವುದು ಎಂದು ಎಡಿಜಿಪಿ ಪ್ರತಾಪ್ ರೆಡ್ಡಿ ಹೇಳಿದರು.
ಉಡುಪಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ‘ನಾವು ಹಂತಹಂತವಾಗಿ ಪರಿಶೀಲನೆ ನಡೆಸಿ ಮಾಹಿತಿಗಳನ್ನು ನೀಡುತ್ತೇವೆ. ಸಮರ್ಪಕವಾಗಿ ಮತ್ತು ಸಮಗ್ರವಾಗಿ ತನಿಖೆಯನ್ನು ಮಾಡಲಾಗುತ್ತಿದೆ. ಸಂತೋಷ್ ಪಾಟೀಲ್ ಮರಣೋತ್ತರ ಪರೀಕ್ಷೆ ವರದಿ, ಎಫ್ ಎಸ್ ಎಲ್, ಫೋರೆನ್ಸಿಕ್ ಸಾಯನ್ಸ್ ಲ್ಯಾಬರೋಟರಿ ವರದಿ ಬರಬೇಕು.
ಡಾಕ್ಟರ್ಸ್ ರಿಪೋರ್ಟ್ಗಳು ಇನ್ನು ಬರಬೇಕಷ್ಟೆ. ಎಲ್ಲಾ ಹಂತದ ವರದಿಗಳನ್ನು ಪರಿಶೀಲನೆ ಮಾಡಬೇಕು. ಮರಣೋತ್ತರ ವರದಿ ಬಗ್ಗೆ ಈ ಹಂತದಲ್ಲಿ ಯಾವುದನ್ನು ಹೇಳಲು ಸಾಧ್ಯವಿಲ್ಲ.
ಅದಲ್ಲದೆ ಎಫ್ ಎಸ್ಎಲ್ ಒಂದು ಒಂದು ಸ್ವತಂತ್ರವಾದ ಸಂಸ್ಥೆ. ಅವರು ಅವರ ವರದಿಗಳನ್ನು ಕೊಡುತ್ತಾರೆ. ಆದರೆ ಆದಷ್ಟು ಶೀಘ್ರವಾಗಿ ವರದಿ ನೀಡುವಂತೆ ಪೊಲೀಸ್ ಇಲಾಖೆಯಿಂದ ಒತ್ತಾಯಿಸಿದ್ದೇವೆ’ ಎಂದು ಹೇಳಿದರು.
ಎಡಿಜಿಪಿ ಆಗಿ ನಾನು ತನಿಖಾ ಅಧಿಕಾರಿಗಳನ್ನು ಮತ್ತು ತಂಡಗಳ ಮೇಲುಸ್ತುವಾರಿ ತೆಗೆದುಕೊಳ್ಳುತ್ತಿದ್ದೇನೆ. ನನ್ನ ನಿರ್ದೇಶನದಂತೆ ತನಿಖಾ ತಂಡಗಳು ಕೆಲಸ ಮಾಡುತ್ತವೆ.
ಪ್ರಕರಣವನ್ನು ಬೇರೆ ಬೇರೆ ಆಯಾಮಗಳಲ್ಲಿ ತನಿಖೆ ಮಾಡಲಾಗುವುದು. ಪ್ರತಿಯೊಂದು ಆಯಾಮಗಳನ್ನು ಕೂಡ ನಾವು ಪರಿಶೀಲನೆ ಮಾಡಬೇಕಾಗುತ್ತದೆ’ ಎಂದರು.
ಇನ್ನು ತನಿಖಾ ಪ್ರಕ್ರಿಯೆಯ ಬಗ್ಗೆ ಇನ್ನೂ ಕೂಡ ಪತ್ರಕರ್ತರು ಕೇಳಿದ ಪ್ರಶ್ನೆ ಉತ್ತರಿಸಿದ ಅವರು ‘ನಾನು ಸಮರ್ಪಕವಾದ ತನಿಖೆ ನಡೆಯುತ್ತದೆ ಎಂದು ಮಾತ್ರ ಎಂದು ಆಶ್ವಾಸನೆ ಕೊಡಬಲ್ಲೆ.
ತನಿಖೆ ಪ್ರಗತಿ ನೋಡಿಕೊಂಡು ಮಾಧ್ಯಮಗಳಿಗೆ ಮಾಹಿತಿ ಕೊಡುತ್ತೇವೆ. ಎಲ್ಲಾ ಅಂಶಗಳನ್ನು ಪರಿಗಣಿಸಿಕೊಂಡು ಯಾವ ಹಂತದಲ್ಲಿ ನಾವು ಮಾಹಿತಿಯನ್ನು ಹಂಚಿಕೊಳ್ಳಬಹುದು ಆವಾಗಲೇ ನಾವು ಹಂಚಿಕೊಳ್ಳಲು ಸಾಧ್ಯವಾಗುವುದು’ ಎಂದು ಹೇಳಿದರು.




