ಮಂಗಳೂರು: ರೈಲು ನಿಲ್ದಾಣದಲ್ಲಿ ರೈಲಿನ ಆಹಾರ ಪೂರೈಕೆ ಮತ್ತು ಕ್ಯಾಟರಿಂಗ್ ವ್ಯವಸ್ಥೆಯ ಪರಿಶೀಲನೆ
ಮಂಗಳೂರು: ಕೇಂದ್ರ ರೈಲು ನಿಲ್ದಾಣದಲ್ಲಿ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಆಹಾರ ಪೂರೈಸುವ ಕೇಟರಿಂಗ್ ವಾಹನವನ್ನು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಅಧಿಕಾರಿಗಳು ಗುರುವಾರ ತಪಾಸಣೆ ನಡೆಸಿದರು.
ರೈಲಿನಲ್ಲಿ ಪ್ರಯಾಣಿಕರಿಗೆ ಪೂರೈಸುವ ಆಹಾರದ ಗುಣಮಟ್ಟ, ಸ್ವಚ್ಛತೆ ಹಾಗೂ ಆಹಾರ ತಯಾರಿಕೆ ಮತ್ತು ಸಾಗಣೆ ವೇಳೆ ಪಾಲಿಸಬೇಕಾದ ಸುರಕ್ಷತಾ ನಿಯಮಗಳನ್ನು ಅಧಿಕಾರಿಗಳು ಪರಿಶೀಲಿಸಿದರು.
ಆಹಾರವನ್ನು ಸಾಗಿಸುವ ವಾಹನದಲ್ಲಿ ಸ್ವಚ್ಛತೆ ಕಾಪಾಡಲಾಗಿದೆಯೇ, ಆಹಾರವನ್ನು ಸೂಕ್ತ ರೀತಿಯಲ್ಲಿ ಸಂಗ್ರಹಿಸಲಾಗಿದೆಯೇ ಹಾಗೂ ನಿಗದಿತ ಮಾನದಂಡಗಳನ್ನು ಪಾಲಿಸಲಾಗುತ್ತಿದೆಯೇ ಎಂಬುದನ್ನು ಪರಿಶೀಲಿಸಲಾಯಿತು.
ಆಹಾರ ಮತ್ತು ಔಷಧ ಸುರಕ್ಷತೆ ಉಲ್ಲಂಘನೆಗಳ ಕುರಿತು ಸಾರ್ವಜನಿಕರು ನೇರವಾಗಿ ದೂರು ನೀಡಲು ಅನುಕೂಲವಾಗುವಂತೆ ರಾಜ್ಯ ಸರ್ಕಾರ ಕ್ಯೂಆರ್ ಕೋಡ್ ವ್ಯವಸ್ಥೆ ಜಾರಿಗೆ ತಂದಿರುವ ಬೆನ್ನಲ್ಲೇ ರೈಲ್ವೆ ಕೇಟರಿಂಗ್ ವ್ಯವಸ್ಥೆಯ ಮೇಲೂ ತಪಾಸಣೆ ವಿಸ್ತರಿಸಲಾಗಿದೆ.





