ಹಿಟ್ ಆ್ಯಂಡ್ ರನ್ ಪ್ರಕರಣ: ಸಂಪಾಜೆಯ ವ್ಯಕ್ತಿ ಮೃತ್ಯು
ಸುಳ್ಯ : ತಾಲೂಕು ಸಂಪಾಜೆ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪರಿಚಿತ ವಾಹನ ಡಿಕ್ಕಿಯಾಗಿ ಗಂಭೀರಾವಸ್ಥೆಯಲ್ಲಿದ್ದ ವ್ಯಕ್ತಿ ಇಂದು ಮಂಗಳೂರಿನ ಆಸ್ಪತ್ರೆಯಲ್ಲಿ ಮೃತರಾಗಿದ್ದಾರೆ ಎಂದು ತಿಳಿದುಬಂದಿದೆ.
ಸಂಪಾಜೆ ನಿವಾಸಿ ಸರೋಜ್ ಕುಮಾರ್ ಎಂಬುವವರು ಇಂದು ಮುಂಜಾನೆ ಸಂಪಾಜೆ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಕಿಂಗ್ ಹೋಗುತ್ತಿದ್ದ ಸಂದರ್ಭ ಅಪರಿಚಿತ ವಾಹನ ಡಿಕ್ಕಿಯಾಗಿ ರಸ್ತೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದರು ಎನ್ನಲಾಗಿದೆ.
ನಿನ್ನೆ ರಾತ್ರಿ ಕಲ್ಲುಗುಂಡಿಯಲ್ಲಿ ಯಕ್ಷಗಾನ ಕಾರ್ಯಕ್ರಮವಿದ್ದು ಕಾರ್ಯಕ್ರಮಕ್ಕೆ ಬಂದ ಸ್ಥಳೀಯ ಕೆಲವರು ಇಂದು ಬೆಳಿಗ್ಗೆ ಈ ಮಾರ್ಗವಾಗಿ ತೆರಳುತ್ತಿದ್ದ ಸಂದರ್ಭ ರಸ್ತೆಯಲ್ಲಿ ಬಿದ್ದಿದ್ದ ಸರೋಜ್ ಕುಮಾರ್ ರವರನ್ನು ಕಂಡು ಕೂಡಲೇ ಮಂಗಳೂರು ಆಸ್ಪತ್ರೆಗೆ ದಾಖಲಿಸಿರುತ್ತಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಆಸ್ಪತ್ರೆಯಲ್ಲಿ ಮೃತರಾಗಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಆರಂಭಿಸಿ ಸಿಸಿ ಟಿವಿ ಆಧಾರದಲ್ಲಿ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಈಚರ್ ವಾಹನವನ್ನು ಮಡಿಕೇರಿ ಸಮೀಪ ವಶಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಮೃತವ್ಯಕ್ತಿ 55 ವರ್ಷದ ವರಾಗಿದ್ದು ಪತ್ನಿ ಬೇಬಿ ಮತ್ತು ಮೂವರು ಪುತ್ರರನ್ನು ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.




