ಮುಸ್ಲಿಮರು ಭಾರತೀಯರಾಗಿದ್ದರೆ ಸಾಲದು, ಬಿಜೆಪಿಯವರೂ ಆಗಿರಬೇಕು: ಮೆಹಬೂಬಾ ಮುಫ್ತಿ
ಶ್ರೀನಗರ: ಮುಸ್ಲಿಮರು ಭಾರತೀಯರಾಗಿದ್ದರೆ ಸಾಲದು, ಬಿಜೆಪಿಯವರೂ ಆಗಿರಬೇಕು ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಹೇಳಿದ್ದಾರೆ.
ಕರ್ನಾಟಕದಲ್ಲಿ ನಡೆಯುತ್ತಿರುವ ಹಿಜಾಬ್ ವಿವಾದದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮೆಹಬೂಬಾ ಮುಫ್ತಿ ಅವರು ಭಾನುವಾರ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ‘ಬಿಜೆಪಿಯ ದಾಳಿ ಹಿಜಾಬ್ ವಿಷಯಕ್ಕೆ ನಿಲ್ಲುವುದಿಲ್ಲ ಎಂದು ನನಗೆ ಆತಂಕವಾಗುತ್ತಿದೆ. ಅವರು ಮುಸ್ಲಿಮರ ಇತರ ಗುರುತುಗಳಿಗೂ ಧಕ್ಕೆ ತರುತ್ತಾರೆ, ಎಲ್ಲವನ್ನೂ ಅಳಿಸುತ್ತಾರೆ. ಭಾರತೀಯ ಮುಸ್ಲಿಮರಿಗೆ, ಭಾರತೀಯರಾಗಿದ್ದರೆ ಸಾಕಾಗುವುದಿಲ್ಲ, ಅವರು ಬಿಜೆಪಿಯಾಗಿರಬೇಕು” ಎಂದು ವಾಗ್ದಾಳಿ ನಡೆಸಿದರು.
ಇನ್ನು ಇದೇ ವಿಚಾರವಾಗಿ ಮಾತನಾಡಿದ ನ್ಯಾಷನಲ್ ಕಾನ್ಫರೆನ್ಸ್ (NC) ಅಧ್ಯಕ್ಷ ಫಾರೂಕ್ ಅಬ್ದುಲ್ಲಾ, ‘ತಮ್ಮ ಧಾರ್ಮಿಕ ನಂಬಿಕೆಗಳನ್ನು ಅಭ್ಯಾಸ ಮಾಡಲು ಮತ್ತು ತಿನ್ನಲು ಪ್ರತಿಯೊಬ್ಬರೂ ಸ್ವತಂತ್ರರು. ಜನರನ್ನು ಕೋಮುವಾದದ ಆಧಾರದ ಮೇಲೆ ವಿಭಜಿಸುವ ಮೂಲಕ ಮತಗಳನ್ನು ಗೆಲ್ಲುವ ಪ್ರಯತ್ನದಲ್ಲಿ ಕೆಲವು ಮೂಲಭೂತವಾದಿಗಳು ಧರ್ಮದ ಮೇಲೆ ದಾಳಿ ಮಾಡುತ್ತಿದ್ದಾರೆ’ ಎಂದು ಹೇಳಿದರು.




