ನಾಗಾಲ್ಯಾಂಡ್, ಅಸ್ಸಾಂ ಗಡಿ ಪ್ರದೇಶದಲ್ಲಿ ಹಿಂಸಾಚಾರ: ಪೊಲೀಸರ ಮೇಲೆ ಕಲ್ಲು ತೂರಾಟ
ದಿಪು (ಅಸ್ಸಾಂ): ನಾಗಾಲ್ಯಾಂಡ್ ಹಾಗೂ ಅಸ್ಸಾಂ ಗಡಿ ಪ್ರದೇಶದಲ್ಲಿ ಅಸ್ಸಾಂ ನೆಲದಲ್ಲಿ ನೆಲೆಯೂರಿರುವ ಕೆಲವು ಕುಟುಂಬಗಳನ್ನು ಸ್ಥಳಾಂತರಗೊಳಿಸಲು ನಡೆಸಲಾದ ಕಾರ್ಯಾಚರಣೆ ಹಿಂಸಾಚಾರಕ್ಕೆ ತಿರುಗಿದೆ. ಕಾರ್ಬಿ ಅನಲಾಗ್ ಅಟಾನಮಸ್ ಕೌನ್ಸಿಲ್ ವತಿಯಿಂದ ಈ ಕಾರ್ಯಾಚರಣೆ ಆರಂಭಿಸಲಾಗಿತ್ತು.
ಕಾರ್ಯಾಚರಣೆ ಆರಂಭವಾದಾಗ, ಸ್ಥಳೀಯರು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದರು. ಆದರೆ ಕೌನ್ಸಿಲ್ನ ಸದಸ್ಯರು ಸ್ಥಳೀಯ ಪ್ರಾರ್ಥನಾ ಸ್ಥಳವೊಂದನ್ನು ನೆಲಸಮ ಮಾಡಲು ಮುಂದಾದಾಗ ಗಲಭೆ ಆರಂಭವಾಯಿತು. ಆಗ ಸ್ಥಳದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ನಿಯೋಜಿ ಸಲಾಗಿದ್ದ ಪೊಲೀಸರು ಮಧ್ಯಪ್ರವೇಶಿಸಿದರು. ಇದರಿಂದ ಸಿಡಿದೆದ್ದ ಸ್ಥಳೀಯರು, ಪೊಲೀರ ಮೇಲೆ ಕೈ ಮಾಡಿ ದಾಂಧಲೆ ನಡೆಸಿದ್ದಾರೆ.
ಪೊಲೀಸರ ಮೇಲೆ ಜನರು ಕಲ್ಲುತೂರಾಟ ನಡೆಸಿದಾಗ ಅವರನ್ನು ನಿಯಂತ್ರಿಸುವ ಸಲುವಾಗಿ ಪೊಲೀಸರು ಗಾಳಿಯಲ್ಲಿ ಹಲವು ಸುತ್ತಿನ ಗುಂಡಿನ ದಾಳಿ ನಡೆಸಿದರಲ್ಲದೆ, ಅಶ್ರುವಾಯು ಪ್ರಯೋಗಿಸಿದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.




