ಗಾಂಧೀಜಿಯನ್ನು ‘ರಾಷ್ಟ್ರಪಿತ’, ನೆಹರೂ ಅವರನ್ನು ದೇಶದ ಮೊದಲ ಪ್ರಧಾನಿ ಎಂದು ಒಪ್ಪಲು ಸಾಧ್ಯವಿಲ್ಲ: ಹಿಂದೂ ಧರ್ಮ ಸಂಸತ್
ಪ್ರಯಾಗರಾಜ್: ಉತ್ತರ ಪ್ರದೇಶದ ಪ್ರಯಾಗರಾಜ್ನಲ್ಲಿ ‘ಧರ್ಮ ಸಂಸತ್’ ನಡೆಯುತ್ತಿದ್ದು, ಭಾರತವನ್ನು ‘ಹಿಂದೂ ರಾಷ್ಟ್ರ’ ಮಾಡಲು ಕರೆ ನೀಡಲಾಗಿದೆ. ಇದೇ ವೇಳೆ, ಮಹಾತ್ಮ ಗಾಂಧಿಯನ್ನು ‘ರಾಷ್ಟ್ರಪಿತ’ ಎಂದು, ಪಂಡಿತ್ ಜವಾಹರಲಾಲ್ ನೆಹರು ಅವರನ್ನು ದೇಶದ ಮೊದಲ ಪ್ರಧಾನಿ ಎಂದು ಒಪ್ಪಲು ನಿರಾಕರಿಸಲಾಗಿದೆ.
ಸುಮೇರು ಪೀಠದ ಶಂಕರಾಚಾರ್ಯ ಸ್ವಾಮಿ, ನರೇಂದ್ರಾನಂದ ಸರಸ್ವತಿ ಮತ್ತಿತರರು ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲಿ ಮೂರು ನಿರ್ಣಯಗಳನ್ನು ಅಂಗೀಕರಿಸಲಾಯಿತು. ಭಾರತವನ್ನು ‘ಹಿಂದೂ ರಾಷ್ಟ್ರ’ ಎಂದು ಘೋಷಿಸುವುದು, ಹರಿದ್ವಾರ ಧರ್ಮ ಸಂಸತ್ನಲ್ಲಿ ಧ್ವೇಷ ಭಾಷಣ ಮಾಡಿದ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ಜಿತೇಂದ್ರ ನಾರಾಯಣ್ ತ್ಯಾಗಿ ಅಲಿಯಾಸ್ ವಸೀಂ ರಿಜ್ವಿ ಅವರನ್ನು ಬಿಡುಗಡೆ ಮಾಡುವುದು, ಮತಾಂತರದಲ್ಲಿ ತೊಡಗಿರುವವರಿಗೆ ಮರಣದಂಡನೆ ವಿಧಿಸಬೇಕೆಂಬ ನಿರ್ಣಯ ಕೈಗೊಳ್ಳಲಾಯಿತು.
‘ಭಾರತದಂತಹ ದೇಶದಲ್ಲಿ ರಾಷ್ಟ್ರಪುತ್ರ (ರಾಷ್ಟ್ರದ ಮಗ) ಆಗಿರಬಹುದೇ ಹೊರತು, ಯಾರೂ ‘ರಾಷ್ಟ್ರಪಿತ’ ಆಗಲಾರರು’ ಎಂದು ನರೇಂದ್ರಾನಂದ ಸರಸ್ವತಿ ತಮ್ಮ ಭಾಷಣದಲ್ಲಿ ಹೇಳಿದರು.




