ಪಕ್ಷವಿರೋಧಿ ಚಟುವಟಿಕೆ ನಡೆಸಿದ ಆರೋಪ:
ಉತ್ತರಾಖಂಡದ ಸಚಿವರನ್ನೇ ಉಚ್ಛಾಟಿಸಿದ ಬಿಜೆಪಿ
ನವದೆಹಲಿ: ಪಕ್ಷವಿರೋಧಿ ಚಟುವಟಿಕೆ ನಡೆಸಿದ ಆರೋಪದಲ್ಲಿ ಉತ್ತರಾಖಂಡದ ಸಚಿವ ಹರಾಕ್ ಸಿಂಗ್ ರಾವತ್ ಅವರನ್ನು ಬಿಜೆಪಿ ಪಕ್ಷದ ಸದಸ್ಯತ್ವದಿಂದ ಆರು ವರ್ಷದ ಅವಧಿಗೆ ಉಚ್ಛಾಟಿಸಿದೆ.
ರಾವತ್ ಅವರು ತಮ್ಮ ಪತ್ನಿ ಸಹಿತ ಕುಟುಂಬದ ಮೂವರಿಗೆ ವಿಧಾನಸಭೆ ಚುನಾವಣೆಯ ಟಿಕೆಟ್ ಬಯಸಿದ್ದರು, ಆದರೆ ಪಕ್ಷದಿಂದ ಒಂದು ಕುಟುಂಬಕ್ಕೆ ಒಂದು ಹುದ್ದೆ ಮಾತ್ರ ಎನ್ನುವ ನಿಯಮವನ್ನು ಅವರು ಮರೆತಿದ್ದರು ಎಂದು ಬಿಜೆಪಿ ಮೂಲಗಳು ಹೇಳಿವೆ.
2017ರ ವಿಧಾನಸಭಾ ಚುನಾವಣೆಗೂ ಮುನ್ನ ರಾವತ್ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿ, ಪಕ್ಷದ ಟಿಕೆಟ್ ಪಡೆದುಕೊಂಡಿದ್ದರು. ನಂತರ ಸಂಪುಟದಲ್ಲಿ ಸ್ಥಾನ ಪಡೆದಿದ್ದರು.
ಈ ಬಾರಿ ಪಕ್ಷದಿಂದ ಹೊರಹಾಕಲ್ಪಟ್ಟ ಬಳಿಕ ಅವರು ಮತ್ತೆ ಕಾಂಗ್ರೆಸ್ ಸೇರುವುದು ಬಹುತೇಕ ಖಚಿತವಾಗಿದೆ. ರಾವತ್ ಜತೆಗೆ ಅವರ ಸೊಸೆ ಕೂಡ ಸೋಮವಾರ ಕಾಂಗ್ರೆಸ್ ಸೇರುವ ಸಾಧ್ಯತೆಯಿದೆ ಎಂದು ಮೂಲಗಳು ಹೇಳಿವೆ.




