ಉಡುಪಿ: ಗೋವಾದಲ್ಲಿ ಮಲ್ಪೆ ಉದ್ಯಮಿಯ ನಿಗೂಢ ಸಾವು; ಮಹಿಳೆಯ ಬಂಧನ
ಉಡುಪಿ: ಮಲ್ಪೆಯ ಉದ್ಯಮಿ ಸಂದೀಪ್ ಸಾಲಿಯಾನ್ ನಿಗೂಢ ಸಾವಿನ ಪ್ರಕರಣದಲ್ಲಿ ಕ್ಯಾಸಿನೋಗಳಿಗೆ ಬರುವ ಉದ್ಯಮಿಗಳನ್ನು ದೋಚುವುದನ್ನೇ ಹವ್ಯಾಸ ಮಾಡಿಕೊಂಡಿದ್ದ ಮಂಗಳೂರು ಮೂಲದ ಮಹಿಳೆಯೋರ್ವಳನ್ನು ಗೋವಾ ಪೊಲೀಸರು ಬಂಧಿಸಿದ್ದಾರೆ.
ಅಕ್ಷತಾ ಅಲಿಯಾಸ್ ಮಮತಾ ಅಲಿಯಾಸ್ ರೂಪಶ್ರೀ(36) ಬಂಧಿತ ಮಹಿಳೆ.
ಮಲ್ಪೆಯಲ್ಲಿ ವಾಟರ್ ಸ್ಪೋರ್ಟ್ಸ್ ಉದ್ಯಮ ನಡೆಸುತ್ತಿದ್ದ ಸಂದೀಪ್ ಸಾಲಿಯಾನ್(41) ಜೂನ್ 30ರಂದು ಗೋವಾಕ್ಕೆ ತೆರಳಿದ್ದ ವೇಳೆ ಲಾಡ್ಜ್ ಒಂದರಲ್ಲಿ ತಂಗಿದ್ದಾಗ ನಿಗೂಢ ರೀತಿ ಮತಪಟ್ಟಿದ್ದಾರೆ. ಮೊದಲಿಗೆ ಹೃದಯಾಘಾತ ಎಂದು ಹೇಳಲಾಗಿದ್ದರೂ ಅವರ ಮೈಮೇಲಿದ್ದ ಚಿನ್ನಾಭರಣ ಕಾಣೆಯಾಗಿದ್ದರಿಂದ ಸಾವಿನ ಬಗ್ಗೆ ಸಂಶಯ ವ್ಯಕ್ತವಾಗಿತ್ತು.
ಗೋವಾ ಪೊಲೀಸರು ಸಿಸಿಟಿವಿ ಪರಿಶೀಲಿಸಿದಾಗ ಮಹಿಳೆಯೊಬ್ಬಳು ಜೊತೆಗಿದ್ದು ಲಾಡ್ಜ್ ನಿಂದ ತೆರಳಿರುವುದು ಕಂಡುಬಂದಿತ್ತು. ಹೀಗಾಗಿ ಗೋವಾ ಪೊಲೀಸರು ಆಕೆಯನ್ನು ಜುಲೈ 3ರಂದು ಶುಕ್ರವಾರ ರಾತ್ರಿ ಮಂಗಳೂರಿನಲ್ಲಿ ಬಂಧಿಸಿದ್ದಾರೆ.
ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದೇನೆಂದು ಹೇಳುತ್ತಿದ್ದ ಮಮತಾ ತನ್ನ ಹೆಸರನ್ನು ಪ್ರದೇಶಕ್ಕೆ ತಕ್ಕಂತೆ ಬದಲಾಯಿಸುತ್ತಿದ್ದಳು. ಜಾಲತಾಣದಲ್ಲಿ ಶ್ರೀಮಂತರನ್ನು ಬಲೆಗೆ, ಕ್ಯಾಸಿನೋಗಳಿಗೆ ಕರೆಸಿಕೊಂಡು ದೋಚುತ್ತಿದ್ದಳು. ಇದೀಗ ಗೋವಾ ಪೊಲೀಸರು ಆಕೆಯ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದಾರೆ.




