ಕಾಸರಗೋಡು: ಕೆರೆಯಲ್ಲಿ ಮುಳುಗಿ ವಿದ್ಯಾರ್ಥಿ ಮೃತ್ಯು
ಕಾಸರಗೋಡು: ವಿದ್ಯಾರ್ಥಿಯೋರ್ವ ಮನೆಯ ಸಮೀಪದ ಕೆರೆಯಲ್ಲಿ ಮುಳುಗಿ ಮೃತಪಟ್ಟ ಘಟನೆ ಕಾಸರಗೋಡಿನ ಉದಯಗಿರಿಯಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ.
ವಿದ್ಯಾನಗರ ಚಾಲ ಮೂಲದ, ಪ್ರಸ್ತುತ ಉದಯಗಿರಿಯಲ್ಲಿ ವಾಸಿಸುತ್ತಿರುವ ಅಬೂಬಕರ್ ಅವರ ಪುತ್ರ ಮುಹಮ್ಮದ್ ಶಾಹಿಲ್ (15) ಮೃತ ಬಾಲಕ.
ಶಾಹಿಲ್ ಪಿಯುಸಿ ವಿದ್ಯಾರ್ಥಿಯಾಗಿದ್ದು, ಶಾಲೆಯಲ್ಲಿ ಓಣಂ ಪರೀಕ್ಷೆ ಬರೆಯಲು ಹೊರಡುವ ಮುನ್ನ ಶಾಹಿಲ್ ಮನೆಯ ಸಮೀಪವಿರುವ ಕೆರೆಗೆ ಸ್ನಾನ ಮಾಡಲು ತೆರಳಿದ್ದನು ಎನ್ನಲಾಗಿದೆ. ಸ್ನಾನ ಮಾಡುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಆಳವಾದ ನೀರಿನಲ್ಲಿ ಮುಳುಗಿದ್ದಾನೆ ಎನ್ನಲಾಗಿದೆ.
ಶಾಹಿಲ್ ನಾಪತ್ತೆಯಾದುದರಿಂದ ಕುಟುಂಬಸ್ಥರು ಮತ್ತು ಸ್ಥಳೀಯರು ಹುಡುಕಾಟ ನಡೆಸಿದಾಗ ಕೆರೆಯಲ್ಲಿ ಮುಳುಗಿರುವುದು ಬೆಳಕಿಗೆ ಬಂದಿದೆ. ತಕ್ಷಣವೇ ಆತನನ್ನು ನೀರಿನಿಂದ ಹೊರತೆಗೆದು ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ, ಅಷ್ಟರಲ್ಲೇ ಶಾಹಿಲ್ ಕೊನೆಯುಸಿರೆಳೆದಿದ್ದಾಗಿ ವೈದ್ಯರು ದೃಢಪಡಿಸಿದರು. ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.





