ಮೆಲ್ಕಾರ್ ಮಹಿಳಾ ಕಾಲೇಜಿನಲ್ಲಿ ರಾಷ್ಟ್ರೀಯ ಯುವ ದಿನಾಚರಣೆಯ ಆಚರಣೆ
ಬಿ.ಸಿ ರೋಡ್: ಜ.13, ಯುವಜನತೆ ದೇಶದ ಸಂಪತ್ತು, ನಿರ್ದಿಷ್ಟ ಗುರಿ ಪ್ರಯತ್ನ ಆಸಕ್ತಿ ಇದ್ದಾಗ ಯಾವುದೇ ಕಾರ್ಯವನ್ನು ಸಾಧಿಸಬಹುದು ಆದರೆ ಇಂದಿನ ಯುವಜನತೆ ತಮ್ಮ ಅಮೂಲ್ಯವಾದ ಯೌವ್ವನವನ್ನು ವ್ಯರ್ಥ ಮಾಡುತ್ತಿದ್ದಾರೆ. ಯುವಜನತೆ ಆಲಸ್ಯ ಬಿಟ್ಟು ಪ್ರಯತ್ನಿಸಿದಾಗ ಭಾರತವು ಜಗತ್ತಿನ ಅಭಿವೃದ್ಧಿ ಹೊಂದಿರುವ ರಾಷ್ಟ್ರಗಳ ಸಾಲಿನಲ್ಲಿ ಮುಂಚೂಣಿಯಲ್ಲಿ ಇರಬಹುದು ಎಂದು ಲೇಖಕ, ನಾಟಕಕಾರ ಎಂ.ಡಿ. ಮಂಚಿ ಹೇಳಿದರು.
ಅವರು ಮೆಲ್ಕಾರ್ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ ಆಯೋಜಿಸಿದ ರಾಷ್ಟ್ರೀಯ ಯುವ ದಿನಾಚರಣೆಯ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು. ಸ್ವಾಮಿ ವಿವೇಕಾನಂದರ ಆದರ್ಶ, ಯೋಜನೆ, ಯೋಚನೆಗಳನ್ನು ಮೈಗೂಡಿಸಿಕೊಂಡಾಗ ಪ್ರತಿಯೊಬ್ಬ ಯುವಕ ಯುವತಿ ಗುರಿ ತಲುಪಬಹುದು ಎಂದು ಅಭಿಪ್ರಾಯ ಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಇತಿಹಾಸ ಉಪನ್ಯಾಸಕ, ರಾಷ್ಟ್ರೀಯ ಸೇವಾ ಯೋಜನಾ ಘಟಕದ ಯೋಜನಾಧಿಕಾರಿ ಅಬ್ದುಲ್ ಮಜೀದ್ ಎಸ್, ಸ್ವಾಮಿ ವಿವೇಕಾನಂದರ ನಡೆ -ನುಡಿ, ಆದರ್ಶ ಮತ್ತು ರಾಷ್ಟ್ರೀಯ ಸೇವಾ ಯೋಜನೆಯ ಮೂಲ ಉದ್ದೇಶಗಳ ಬಗ್ಗೆ ವಿವರಿಸಿದರು.
ವೇದಿಕೆಯಲ್ಲಿ ಉಪ ಪ್ರಾಂಶುಪಾಲೆ ಸುನೀತಾ ಪಿರೇರಾ, ಉಪನ್ಯಾಸಕರಾದ ಕಲಾವತಿ, ಮಮತಾ ರಾವ್, ರಾ.ಸೇ.ಯೋ. ಘಟಕದ ನಾಯಕಿ ಆಯಿಷಾ ನೈಫಾ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ರಾಫೀಝ ಸ್ವಾಗತಿಸಿ, ವಿದ್ಯಾರ್ಥಿ ಪರಿಷತ್ ನಾಯಕಿ ಸೌಲತ್ ನಿಶಾ ವಂದಿಸಿದರು. ಝುಬೈದ ಸಲ್ಹ ಕಾರ್ಯಕ್ರಮ ನಿರೂಪಿಸಿದರು.




