ಸುಳ್ಯ: ತೆಂಗಿನ ಮರದಿಂದ ಬಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಮೃತ್ಯು
ಸುಳ್ಯ: ಪೆರಾಜೆ ಮೂಲದ ನಿವಾಸಿ ಡಿಸೆಂಬರ್ 25ರಂದು ತನ್ನ ಮನೆಯ ದುರಸ್ತಿ ಕಾರ್ಯದ ಸಂದರ್ಭ ತೆಂಗಿನ ಮರದಿಂದ ಬಿದ್ದು ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಅವರು ಚಿಕಿತ್ಸೆ ಫಲಕಾರಿಯಾಗದೆ ಜನವರಿ 5ರಂದು ಮೃತರಾಗಿದ್ದಾರೆ ಎಂದು ತಿಳಿದುಬಂದಿದೆ.
ಸುಳ್ಯ ತಾಲೂಕು ಪೆರಾಜೆ ಬಂಗಾರಕೋಡಿಯ ಹರೀಶ್ ಎಂಬ ವ್ಯಕ್ತಿ ತಮ್ಮ ಹಳೆ ಮನೆಯನ್ನು ಕೆಡವಿ ಹೊಸ ಮನೆ ಕಟ್ಟಲು ಜಾಗ ಸಮತಟ್ಟು ಮಾಡಲು ಬಂದ ಜೆಸಿಬಿಯ ಚಾಲಕರಿಗೆ ಕುಡಿಯಲೆಂದು ಬೊಂಡ ತೆಗೆಯಲು ತೆಂಗಿನ ಮರ ಏರಿದ್ದರು. ಈ ಸಂದರ್ಭದಲ್ಲಿ ತೆಂಗಿನ ಮರದಿಂದ ಆಯತಪ್ಪಿ ಅವರು ಬಿದ್ದು ಗಂಭೀರ ಗಾಯಗೊಂಡರು. ಕೂಡಲೇ ಅಲ್ಲಿದ್ದವರು ಸುಳ್ಯ ಖಾಸಗಿ ಆಸ್ಪತ್ರೆಗೆ ಕರೆತಂದು, ಬಳಿಕ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಿದರು. ಕುತ್ತಿಗೆ ಹಿಂಬಾಗ, ಬೆನ್ನು , ಸೊಂಟದ ಮೂಳೆ ಮುರಿತಕ್ಕೊಳಗಾದ ಹರೀಶ್ ಅವರು ಚಿಕಿತ್ಸೆ ಫಲಕಾರಿಯಾಗದೇ ಜ. 5 ರಂದು ಮೃತಪಟ್ಟರು.
ಮೃತರು ಪತ್ನಿ ಅಂತರಾಷ್ಟ್ರೀಯ ಹಿರಿಯ ಕ್ರೀಡಾಪಟು ವಿದ್ಯಾ ಬಂಗಾರಕೋಡಿ, ಹಾಗೂ ಇಬ್ಬರು ಪುತ್ರಿಯರು, ಓರ್ವ ಪುತ್ರನನ್ನು ಅಗಲಿದ್ದಾರೆ.




