ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ ಪ್ರಕರಣ: ಪ್ರಮುಖ ಆರೋಪಿಯ ಮೂರು ಅಂತಸ್ತಿನ ಮನೆ ನೆಲಸಮ ಮಾಡಿದ ಅಧಿಕಾರಿಗಳು
ಉತ್ತರ ಪ್ರದೇಶ: ಮಕ್ಕಳು ಸೇರಿದಂತೆ 13 ಮಂದಿ ಮೃತಪಟ್ಟ ಕೌಶಾಂಬಿ ಜಿಲ್ಲೆಯ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ ಘಟನೆಯ ಪ್ರಮುಖ ಆರೋಪಿಗೆ ಸೇರಿದ ಮೂರು ಅಂತಸ್ತಿನ ಮನೆಯನ್ನು ಉತ್ತರ ಪ್ರದೇಶದ ಅಧಿಕಾರಿಗಳು ನೆಲಸಮಗೊಳಿಸಿದ್ದಾರೆ.
ಸ್ಫೋಟ ಸಂಭವಿಸಿದ ಎರಡು ದಿನಗಳ ನಂತರ ಪ್ರಯಾಗ್ ರಾಜ್ ಅಭಿವೃದ್ಧಿ ಪ್ರಾಧಿಕಾರ ಮತ್ತು ಕೌಶಾಂಬಿ ಪೊಲೀಸರ ಜಂಟಿ ತಂಡ ಈ ಕ್ರಮ ಕೈಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಟಾಕಿ ಕಾರ್ಖಾನೆಯ ಮಾಲೀಕ ನೌಶಾದ್ ನನ್ನು ಮಂಗಳವಾರ ಬಂಧಿಸಲಾಗಿದ್ದು, ಆತನ ಕುಟುಂಬದ ಇಬ್ಬರು ಮಹಿಳೆಯರನ್ನೂ ಬಂಧಿಸಲಾಗಿದೆ. ಇತರ ಮೂವರು ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದು, ಅವರ ಕುರಿತು ಮಾಹಿತಿ ನೀಡಿದವರಿಗೆ 25,000 ರೂ. ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ.
ಕಾರ್ಖಾನೆ ಅಕ್ರಮವಾಗಿ ಕಾರ್ಯನಿರ್ವಹಿಸಲು ಅನುಮತಿ ನೀಡಿದ ಒಂಭತ್ತು ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ.
ಮಂಗಳವಾರ ಸಂಜೆ 6 ಗಂಟೆಗೆ ನೌಶಾದ್ ಮನೆಗೆ ಬುಲ್ಡೋಝರ್ ತರಲಾಗಿದ್ದು, 11 ಗಂಟೆಗಳ ಸುದೀರ್ಘ ಕಾರ್ಯಾಚರಣೆ ನಡೆಸಿ ಮನೆಯನ್ನು ನೆಲಸಮಗೊಳಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಗತ್ಯದ ಕಟ್ಟಡ ನಕ್ಷೆ ಅನುಮೋದನೆ ಮತ್ತು ಪ್ರಾಧಿಕಾರದಿಂದ ಇತರ ಅನುಮತಿಗಳನ್ನು ಪಡೆಯದೆ ಈ ಮನೆಯನ್ನು ನಿರ್ಮಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅಮಿತ್ ಪಾಲ್ ತಿಳಿಸಿದ್ದಾರೆ.





