ಕೆನಡಾದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಭಾರತ ಮೂಲದ ಯುವತಿಯ ಬರ್ಬರ ಹತ್ಯೆ
ನವದೆಹಲಿ: ವಿದೇಶದಲ್ಲಿ ಓದಿ ಭವಿಷ್ಯದಲ್ಲಿ ಉತ್ತಮ ಸಾಧನೆ ಮಾಡಬೇಕೆಂದು ಕನಸು ಕಂಡಿದ್ದ ಭಾರತೀಯ ವಿದ್ಯಾರ್ಥಿನಿಯೊಬ್ಬಳು ಕೆನಡಾದಲ್ಲಿ ಬರ್ಬರವಾಗಿ ಕೊಲೆಯಾಗಿದ್ದಾಳೆ ಎಂಬ ಘಟನೆ ಬೆಳಕಿಗೆ ಬಂದಿದೆ.
ಪಂಜಾಬ್ ಮೂಲದ ದಮನ್ ಪ್ರೀತ್ ಕೌರ(23) ಕೊಲೆಯಾದ ಯುವತಿ. ರಿತೀಶ್ ಕುಮಾರ್(22) ಕೊಲೆಗೈದ ಆರೋಪಿಯಾಗಿದ್ದಾನೆ. ಇವರಿಬ್ಬರು ಲಿವ್ ಇನ್ ಸಂಬಂಧದಲ್ಲಿದ್ದರು ಎಂದು ತಿಳಿದು ಬಂದಿದೆ.
ದಮನ್ ಪ್ರೀತ್ ಕೌರ ಸುಮಾರು ಐದು ವರ್ಷಗಳ ಹಿಂದೆ ಸ್ಟೂಡೆಂಟ್ ವಿಸಾದ ಮೇಲೆ ಕೆನಡಾಕ್ಕೆ ತೆರಳಿದ್ದರು. ಜು.9ರದು ಎಡ್ಮಂಟನ್ನ ಸಿಲ್ವರ್ಬೆರಿ ಬಡಾವಣೆಯ ಮನೆಯೊಂದರಲ್ಲಿ ದಮನ್ಪ್ರೀತ್ ಅವರು ಗಂಭೀರವಾಗಿ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದನ್ನು ಕಂಡು ಸ್ಥಳೀಯರು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದರು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ತನಿಖೆ ಕೈಗೊಂಡಿದ್ದ ಪೊಲೀಸರಿಗೆ ಮರಣೋತ್ತರ ಪರೀಕ್ಷೆಯ ಮೂಲಕ ಆಕೆಯನ್ನು ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂದು ತಿಳಿಯಿತು. ಈ ಸಂಬಂಧ ಆಕೆಯ ಪ್ರಿಯಕರ ರಿತೀಶ್ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಆ ವೇಳೆ ಕೃತ್ಯ ತಾನೇ ಮಾಡಿರುವುದಾಗಿ ಬಾಯಿಬಿಟ್ಟಿದ್ದಾನೆ.
ಇನ್ನು ಮೃತ ಯುವತಿಯ ಮೃತದೇಹವನ್ನು ಭಾರತಕ್ಕೆ ತರಲು 20,000 ಕೆನಡಿಯನ್ ಡಾಲರ್ ಅಂದರೆ ಸುಮಾರು ₹12.23 ಲಕ್ಷ ರೂ. ಗಳು ಗುರಿ ಇಟ್ಟುಕೊಳ್ಳಲಾಗಿದೆ. ಕುಟುಂಬಸ್ಥರಿಗೆ ಆರ್ಥಿಕ ಸಂಕಷ್ಟ ಎದುರಾದ ಹಿನ್ನೆಲೆ, GoFundMe ಅಭಿಯಾನವನ್ನು ಪ್ರಾರಂಭಿಸಲಾಗಿದೆ. ಸುಮಾರು ₹11 ಲಕ್ಷ ರೂ. ಗೂ ಅಧಿಕ ಹಣ ಈಗಾಗಲೇ ಸಂಗ್ರಹವಾಗಿದೆ ಎನ್ನಲಾಗಿದೆ.




