ಬೆಳ್ತಂಗಡಿ: ಚಲಿಸುತ್ತಿದ್ದ ಬೈಕ್ ನ ಮೇಲೆ ಉರುಳಿ ಬಿದ್ದ ಮರ
ಬೆಳ್ತಂಗಡಿ: ಭಾರೀ ಮಳೆ ಹಾಗೂ ಬಿರುಗಾಳಿಯ ಪರಿಣಾಮ ರಸ್ತೆ ಬದಿಯ ಮರೊಂದು ಚಲಿಸುತ್ತಿದ್ದ ಬೈಕ್ ಮೇಲೆ ಉರುಳಿ ಬಿದ್ದ ಘಟನೆ ಶುಕ್ರವಾರ ಶಿಶಿಲ ಸಮೀಪದ ಬರ್ಗುಳದಲ್ಲಿ ನಡೆದಿದೆ. ಅದೃಷ್ಟವಶಾತ್ ಬೈಕ್ ಸವಾರ ಅಪಾಯದಿಂದ ಪಾರಾಗಿದ್ದಾರೆ.
ಬೈಕ್ ಸವಾರರನ್ನು ಶಿಶಿಲ ಗ್ರಾಮದ ದೇಣೋಡಿ ನಿವಾಸಿ ರತೀಶ್ ಪೂಜಾರಿ ಎಂದು ಗುರುತಿಸಲಾಗಿದೆ. ಅವರು ಕೊಕ್ಕಡದಿಂದ ಶಿಶಿಲ ಕಡೆಗೆ ಬೈಕ್ನಲ್ಲಿ ತೆರಳುತ್ತಿದ್ದ ವೇಳೆ, ರಸ್ತೆ ಬದಿಯಲ್ಲಿದ್ದ ಮರ ಭಾರೀ ಮಳೆ ಮತ್ತು ಗಾಳಿಯಿಂದ ಬೇರುಸಹಿತ ಉರುಳಿ ಬೈಕ್ ಮೇಲೆ ಬಿದ್ದಿದೆ.
ಉರುಳಿದ ಮರ ವಿದ್ಯುತ್ ತಂತಿಗಳ ಮೇಲೂ ಬಿದ್ದ ಪರಿಣಾಮ ಆ ಪ್ರದೇಶದಲ್ಲಿ ಕೆಲಕಾಲ ವಿದ್ಯುತ್ ಸರಬರಾಜು ಸ್ಥಗಿತಗೊಂಡಿತು.
ಘಟನೆಯಿಂದ ವಾಹನ ಸಂಚಾರಕ್ಕೂ ತಾತ್ಕಾಲಿಕ ಅಡಚಣೆ ಉಂಟಾಯಿತು. ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಪಡೆಯ ಅರಸಿನಮಕ್ಕಿ-ಶಿಶಿಲ ಘಟಕದ ಸದಸ್ಯರು ಹಾಗೂ ಸ್ಥಳೀಯ ನಿವಾಸಿಗಳು ಮರವನ್ನು ತೆರವುಗೊಳಿಸಿ ವಾಹನ ಸಂಚಾರವನ್ನು ಸುಗಮಗೊಳಿಸಿದರು.
ಬಳಿಕ ಪಂಚಾಯತ್ ಸಿಬ್ಬಂದಿ ಹಾಗೂ ಮೆಸ್ಕಾಂನ ಪವರ್ಮ್ಯಾನ್ ಸಂತೋಷ್ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದರು.




