ಕಾಸರಗೋಡು: ಬಸ್ಸಿನಿಂದ ಇಳಿಯುತ್ತಿದ್ದ ವೃದ್ಧೆಯ ಚಿನ್ನದ ಸರ ಕಳ್ಳತನಕ್ಕೆ ಯತ್ನ: ಆರೋಪಿ ಮಧುರೈ ಮೂಲದ ಮಹಿಳೆಯ ಬಂಧನ
ಕಾಸರಗೋಡು: ಹೊಸಂಗಡಿಯಲ್ಲಿ ಬಸ್ಸಿನಿಂದ ಇಳಿಯುತ್ತಿದ್ದ ವೃದ್ಧೆಯೊಬ್ಬರ ಮೂರು ಪವನ್ ಚಿನ್ನದ ಸರಗಳ್ಳತನಕ್ಕೆ ಯತ್ನಿಸಿದ ತಮಿಳುನಾಡು ಮೂಲದ ಮಹಿಳೆಯನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ.
ಮಧುರೈ ಮೂಲದ ಮುತ್ತಾತ್ತ (40) ಬಂಧಿತ ಆರೋಪಿ.
ರವಿವಾರ ಮಧ್ಯಾಹ್ನ ಸುಮಾರು 2 ಗಂಟೆಯ ವೇಳೆಗೆ ಈ ಘಟನೆ ನಡೆದಿದೆ. ಬಂಗ್ರಮಂಜೇಶ್ವರ ನಿವಾಸಿ ಪ್ರೇಮಾ (77) ಅವರ ಚಿನ್ನದ ಸರವನ್ನು ಕದಿಯಲು ಯತ್ನಿಸಲಾಗಿದೆ. ಇವರು ಸಂಬಂಧಿಕರೊಬ್ಬರ ವಿವಾಹದ ಆರತಕ್ಷತೆ ಮುಗಿಸಿ ಮಂಗಳೂರಿನಿಂದ ಕೆ.ಎಸ್.ಆರ್.ಟಿ.ಸಿ ಬಸ್ ನಲ್ಲಿ ಹೊಸಂಗಡಿಗೆ ಬರುತ್ತಿದ್ದರು. ಹೊಸಂಗಡಿ ಸ್ಟಾಪ್ ನಲ್ಲಿ ಬಸ್ ನಿಂದ ಇಳಿಯುತ್ತಿದ್ದಾಗ, ಇವರ ಹಿಂದೆಯೇ ಇದ್ದ ಚೂಡಿದಾರ್ ಧರಿಸಿದ್ದ ಮಹಿಳೆಯೊಬ್ಬಳು ಜಾಣತನದಿಂದ ಸರವನ್ನು ಕತ್ತರಿಸಲು ಯತ್ನಿಸಿದ್ದಾಳೆ. ಇದನ್ನು ಗಮನಿಸಿದ ಮತ್ತೊಬ್ಬ ಸಹಪ್ರಯಾಣಿಕ ಯುವತಿ ತಕ್ಷಣ ಪ್ರೇಮಾ ಅವರ ಗಮನಕ್ಕೆ ತಂದಿದ್ದಾರೆ. ತಕ್ಷಣವೇ ಎಚ್ಚೆತ್ತ ಸಹಪ್ರಯಾಣಿಕರು ಹಾಗೂ ಸ್ಥಳೀಯ ಸಾರ್ವಜನಿಕರು ಆರೋಪಿ ಮಹಿಳೆಯನ್ನು ಸುತ್ತುವರಿದು ತಡೆದು ನಿಲ್ಲಿಸಿದ್ದಾರೆ.
ಬಳಿಕ ಮಂಜೇಶ್ವರ ಪೊಲೀಸರಿಗೆ ಮಾಹಿತಿ ನೀಡಿ ಆಕೆಯನ್ನು ಒಪ್ಪಿಸಿದ್ದಾರೆ. ಬಂಧಿತ ಮಹಿಳೆಯ ವಿರುದ್ಧ ಈಗಾಗಲೇ ವಿವಿಧ ಠಾಣೆಗಳಲ್ಲಿ ಹಲವು ಕಳ್ಳತನ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದು, ಆಕೆಯನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ.





