ಜಾತಿ ವ್ಯವಸ್ಥೆಯಿಂದ ಹಿಂದೂ ಧರ್ಮಕ್ಕೆ ಅಪಾಯ: ಅನಂತ್ ಕುಮಾರ್ ಹೆಗಡೆ
ಭಟ್ಕಳ: ಹಿಂದೂ ಧರ್ಮವು ಇಂದು ಜಾತಿ-ಜಾತಿಯಲ್ಲಿ ಬಿದ್ದು ಹೊರಳಾಡುತ್ತಿದೆ. ನಮಗೆ ಮುಸ್ಲಿಮರು ಅಥವಾ ಕ್ರೈಸ್ತರಿಂದ ಅಪಾಯ ಬಂದಿಲ್ಲ, ಬದಲಾಗಿ ನಮ್ಮೊಳಗಿನವರಿಂದಲೇ ನಮಗೆ ಹೆಚ್ಚಿನ ಅಪಾಯ ಎದುರಾಗಿದೆ ಎಂದು ಮಾಜಿ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಹೇಳಿದರು.
ನಗರದಲ್ಲಿ ಆಯೋಜಿಸಲಾಗಿದ್ದ ‘ಹಿಂದೂ ಸಂಗಮ’ ಸಮ್ಮೇಳನದಲ್ಲಿ ಮಾತನಾಡಿದ ಅವರು, ಸಮಾಜವನ್ನು ಕಾಡುತ್ತಿರುವ ಜಾತಿ ಪದ್ಧತಿಯ ವಿರುದ್ಧ ವಾಗ್ದಾಳಿ ನಡೆಸಿದರು.
ವೇದಿಕೆಗಳಲ್ಲಿ ಒಗ್ಗಟ್ಟಿನ ಮಾತುಗಳನ್ನಾಡುತ್ತೇವೆ, ಆದರೆ ಅಲ್ಲಿಂದ ಹೊರಹೋದ ತಕ್ಷಣ ಜಾತಿ ಹುಳ ನಮ್ಮ ತಲೆಯಲ್ಲಿ ತುಂಬಿಕೊಂಡು ತಿನ್ನಲು ಶುರು ಮಾಡುತ್ತದೆ. ಇದಕ್ಕಿಂತ ದೊಡ್ಡ ವಿಷದ ಚಿಂತನೆ ಮತ್ತೊಂದಿಲ್ಲ ಎಂದು ಹೇಳಿದರು.
ಹಿಂದೂ ಸಮಾಜದ ಹಿನ್ನಡೆಗೆ ಹೊರಗಿನ ಶಕ್ತಿಗಳಿಗಿಂತ ಆಂತರಿಕ ದ್ರೋಹವೇ ಕಾರಣ ಎಂದು ವಿಶ್ಲೇಷಿಸಿದ ಅವರು, “ಮುಸಲ್ಮಾನರಾಗಲಿ, ಕ್ರೈಸ್ತರಾಗಲಿ ನಮ್ಮನ್ನು ಸೋಲಿಸಲು ಸಾಧ್ಯವಿರಲಿಲ್ಲ. ಆದರೆ ಇತಿಹಾಸದುದ್ದಕ್ಕೂ ನಮ್ಮವರೇ ಬೆನ್ನಿಗೆ ಚೂರಿ ಹಾಕಿದ್ದಾರೆ. ಕಿತ್ತೂರು ಚೆನ್ನಮ್ಮನನ್ನು ಬ್ರಿಟಿಷರು ಸೋಲಿಸಲಿಲ್ಲ, ಬದಲಾಗಿ ಮಲ್ಲಪ್ಪ ಶೆಟ್ಟಿ ಸೋಲಿಸಿದ. ಸಮಾಜವನ್ನು ಒಡೆದಿದ್ದು ಜಯಚಂದ್ರನೇ ಹೊರತು ಅನ್ಯರಲ್ಲ” ಎಂದರು.




