ಜಮಾಅತೆ ಇಸ್ಲಾಮೀ ಹಿಂದ್, ವಿಟ್ಲ ವತಿಯಿಂದ ‘ಅಹ್ಲನ್ ರಮದಾನ್’ ಕಾರ್ಯಕ್ರಮ
ವಿಟ್ಲ: ಜಮಾಅತೆ ಇಸ್ಲಾಮೀ ಹಿಂದ್, ವಿಟ್ಲ ವತಿಯಿಂದ ಇಲ್ಲಿನ ಬ್ರೈಟ್ ಆಡಿಟೋರಿಯಂನ ಸಭಾಂಗಣದಲ್ಲಿ ‘ಅಹ್ಲನ್ ರಮದಾನ್’ ಹೆಸರಿನಲ್ಲಿ ಪವಿತ್ರ ಮಾಸದ ಸಿದ್ಧತೆಗಾಗಿ ರಮಝಾನ್ ಸ್ವಾಗತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಜಮಾಅತೆ ಇಸ್ಲಾಮೀ ಹಿಂದ್, ಸ್ಥಾನೀಯ ಸಮಿತಿಯ ಅಧ್ಯಕ್ಷರಾಗಿರುವ ಜನಾಬ್ ಯಾಸೀನ್ ಬೇಗ್ ರವರ ಅಧ್ಯಕ್ಷತೆಯಲ್ಲಿ ಜರುಗಿದ ಈ ಕಾರ್ಯಕ್ರಮದಲ್ಲಿ ಜನಾಬ್ ಉಮರ್ ಮೌಲವಿ ಮಡಿಕೇರಿ – ಪವಿತ್ರ ರಮದಾನ್ ತಿಂಗಳಿಗೆ ನಾವು ಯಾವ ರೀತಿಯಲ್ಲಿ ನಮ್ಮನ್ನು ಸಜ್ಜುಗೊಳಿಸಬೇಕು ಎಂಬುವುದರ ಕುರಿತು ವಿಶೇಷ ಪ್ರವಚನವನ್ನು ನೀಡಿದರು.
ಕಾರ್ಯಕ್ರಮದ ಪ್ರಾಸ್ತಾವಿಕ ಮಾತುಗಳನ್ನು ನೀಡಿದ ಅಬ್ದುಲ್ ಖಾದರ್ ಕುಕ್ಕಾಜೆಯವರು ಕಾರ್ಯಕ್ರಮಕ್ಕೆ ಆಗಮಿಸಿರುವ ಅತಿಥಿ ಅಭ್ಯಾಗತರುಗಳನ್ನು ಸ್ವಾಗತಿಸಿದರು. ಜಮಾಅತೆ ಇಸ್ಲಾಮೀ ವಿಟ್ಲ ಇದರ ಅಧೀನದಲ್ಲಿರುವ ಮದ್ರಸ ‘ವ್ಯಾಲ್ಯೂ ಎಡುಕೇಷನ್ ಸೆಂಟರ್ ಇದರ ಮುಖ್ಯ ಶಿಕ್ಷಕಿ ಶ್ರೀಮತಿ ರಾಬಿಯಾ ಅಬ್ದುಲ್ ರಹೀಮ್ ಅವರು ಈ ಮದ್ರಸದ ಮಕ್ಕಳ ಅರಬಿ ಭಾಷಾ ಜ್ಞಾನ ಸೇರಿದಂತೆ ಶೈಕ್ಷಣಿಕ ವೈವಿಧ್ಯತೆಯ ಬಗ್ಗೆ ಮಾಹಿತಿ ನೀಡಿದರು.
ಈ ಕಾರ್ಯಕ್ರಮವನ್ನು ನಿರೂಪಿಸಿದ, ಜ.ಇ. ಹಿಂದ್ ಇದರ ಸ್ಥಾನೀಯ ಅಧ್ಯಕ್ಷರು ಮತ್ತು ಅನುಗ್ರಹ ಮಹಿಳಾ ವಿದ್ಯಾಸಂಸ್ಥೆ, ಕಲ್ಲಡ್ಕ ಇದರ ಆಡಳಿತ ಮಂಡಳಿಯ ಅಧ್ಯಕ್ಷರೂ ಆಗಿರುವ ಜನಾಬ್ ಯಾಸೀನ್ ಬೇಗ್ ರವರು ಅನುಗ್ರಹ ಮಹಿಳಾ ಕಾಲೇಜಿನಲ್ಲಿ ಲಭ್ಯವಿರುವ ವಿವಿಧ ಅಧ್ಯಯನ ಕೋರ್ಸ್ ಗಳ ಬಗ್ಗೆ ವಿವರಣೆಯನ್ನು ನೀಡಿದರು. ಈಗಾಗಲೇ 2026-27 ರ ಶೈಕ್ಷಣಿಕ ವರ್ಷದ ದಾಖಲಾತಿ ಆರಂಭಿಸಿದ್ದು ಆಸಕ್ತ ವಿದ್ಯಾಥಿಗಳು ತ್ವರೆ ಮಾಡಿಕೊಳ್ಳುವಂತೆ ಕೇಳಿಕೊಂಡು ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರಿಗೂ ಧನ್ಯವಾದವಿತ್ತರು.




