ವಿಟ್ಲದ ರಕ್ಷಾ ಕ್ಲಿನಿಕ್ ಆ್ಯಂಡ್ ಲ್ಯಾಬೋರೇಟರಿಯಲ್ಲಿ ರಕ್ತ ಪರೀಕ್ಷೆ ವರದಿಯಲ್ಲಿ ಎಡವಟ್ಟು: ಪ್ಲೇಟ್ಲೇಟ್ ಸಂಖ್ಯೆಯಲ್ಲಿ ಬಹಳಷ್ಟು ವ್ಯತ್ಯಾಸ: ವಿಟ್ಲದ ಲ್ಯಾಬೊರೇಟರಿ ವಿರುದ್ಧ ಪೊಲೀಸರಿಗೆ ದೂರು ನೀಡಿದ ವೈದ್ಯ
ವಿಟ್ಲ: ವೈದ್ಯರೋರ್ವರ ರಕ್ಷ ಪರೀಕ್ಷೆ ನಡೆಸಿದ ಪ್ರಯೋಗಾಲಯದ ವರದಿಯಲ್ಲಿ, ರಕ್ತದ ಪೇಟ್ಲೇಟ್ ಸಂಖ್ಯೆಯಲ್ಲಿ ಬಹಳಷ್ಟು ವ್ಯತ್ಯಾಸ ಕಂಡು ಬಂದ ಹಿನ್ನೆಲೆಯಲ್ಲಿ ಪೊಲೀಸರಿಗೆ ದೂರು ನೀಡಲಾದ ಘಟನೆ ವಿಟ್ಲದಿಂದ ವರದಿಯಾಗಿದೆ.
ವಿಟ್ಲ ಚಂದಳಿಕೆಯಲ್ಲಿ ಕೆಲಸಮಯದ ಹಿಂದೆ ಆರಂಭಗೊಂಡ ರಕ್ಷಾ ಕ್ಲಿನಿಕ್ ಆ್ಯಂಡ್ ಲ್ಯಾಬೋರೇಟರಿಯಲ್ಲಿ ಈ ಎಡವಟ್ಟು ನಡೆದಿರುವುದಾಗಿ ವರದಿಯಾಗಿದೆ. ಘಟನೆಗೆ ಸಂಬಂಧಿಸಿದಂತೆ ಬಂಟ್ವಾಳ ತಾಲೂಕು ಬದನಾಜೆ ಸಮೀಪದ ನಿವಾಸಿ, ಕಿಯಾನ್ ಹರ್ಬಲ್ ಸೆಂಟರ್ ಕಂಪೆನಿಯ ಮಾಲೀಕರಾಗಿರುವ ಡಾ. ಶರತ್ ಶೆಟ್ಟಿ ಅವರು ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಹದಿನೈದು ದಿನಗಳ ಹಿಂದೆ ಡೆಂಗ್ಯೂ ಜ್ವರ ಬಾಧಿಸಿದ ಹಿನ್ನೆಲೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖನಾಗಿದ್ದೆ. ಫೆ.15ರಂದು ರಕ್ತದ ಪೇಟ್ಲೆಟ್ ಕೌಂಟ್ ತಿಳಿಯುವ ನಿಟ್ಟಿನಲ್ಲಿ ರಕ್ತ ಪರೀಕ್ಷೆಗಾಗಿ ರಕ್ಷಾ ಕ್ಲಿನಿಕ್ ಆ್ಯಂಡ್ ಲ್ಯಾಬೋರೇಟರಿಗೆ ತೆರಳಿದ್ದೆ. ಆ ಬಳಿಕ ಕೆಲವೇ ಹೊತ್ತಿನಲ್ಲಿ ನನ್ನ ಮೊಬೈಲ್ ಕಾಲ್ ಮಾಡಿದ ಲ್ಯಾಬ್ನ ಸಿಬ್ಬಂದಿ ಕೂಡಲೇ ನೀವು ಬಂದು ಅಡ್ಮಿಟ್ ಆಗಬೇಕು. ನಿಮ್ಮ ಪ್ಲೇಟ್ಲೇಟ್ ಸಂಖ್ಯೆ ಬಹಳಷ್ಟು ಕಡಿಮೆ ಇದೆ ಎಂದಿದ್ದರು ಮಾತ್ರವಲ್ಲದೆ ರಕ್ತ ಪರೀಕ್ಷೆಯ ವರದಿಯನ್ನೂ ಮೊಬೈಲ್ಗೆ ಕಳಿಸಿದ್ದರು. ಕೂಡಲೇ ಲ್ಯಾಬ್ ಗೆ ತೆರಳಿ ಅಲ್ಲಿ ವಿಚಾರಿಸಿದಾಗ, ನಿಮ್ಮ ಪ್ಲೇಟ್ಲೇಟ್ ಸಂಖ್ಯೆ 18000 ಆಗಿದ್ದು, ನೀವು ಕೂಡಲೇ ಅಡ್ಮಿಟ್ ಆಗಬೇಕು ಎಂದರು. ರಿಪೋರ್ಟ್ ಪ್ರತಿಯನ್ನು ಸೀಲ್ ಹಾಕಿ, ಸಹಿ ಮಾಡಿ ನೀಡಿ ಎಂದು ಹೇಳಿದಾಗ ಸಿಬ್ಬಂದಿಗಳು ನೀಡಲು ನಿರಾಕರಿಸಿದ್ದಾರೆ ಎಂದು ಶರತ್ ರವರು ಆರೋಪಿಸಿದ್ದಾರೆ. ಕೂಡಲೇ ಅಲ್ಲಿಂದ ತೆರಳಿ ವಿಟ್ಲದಲ್ಲಿರುವ ಧನ್ವಂತರಿ ಹಾಗೂ ವಿಕೇರ್ ಲ್ಯಾಬ್ ನಲ್ಲಿ ಅದೇ ಟೆಸ್ಟ್ ಗಳನ್ನು ಮಾಡಿಸಿದ ವೇಳೆ, ಎರಡೂ ಕಡೆಯೂ ದರದಿಯಲ್ಲಿ ಪ್ಲೇಟ್ಲೇಟ್ ಸಂಖ್ಯೆ, ಒಂದು ಲಕ್ಷದ ಹತ್ತು ಸಾವಿರಕ್ಕಿಂತ ಮೇಲಿತ್ತು. ಈ ನಿಟ್ಟಿನಲ್ಲಿ ಘಟನೆ ಬಗ್ಗೆ ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿರುವುದಾಗಿ ಡಾ.ಶರತ್ ಶೆಟ್ಟಿರವರು ತಿಳಿಸಿದ್ದಾರೆ. ಈ ಕುರಿತು ಪ್ರತಿಕ್ರಿಯೆಗಾಗಿ ರಕ್ಷಾಕ್ಲಿನಿಕ್ ಆ್ಯಂಡ್ ಲ್ಯಾಬೊರೇಟರಿಯ ಮೊಬೈಲ್ ಸಂಖ್ಯೆಗೆ ಕರೆ ಮಾಡಿದರೆ ಅವರು ಕರೆಯನ್ನು ಸ್ವೀಕರಿಸಲಿಲ್ಲ.
ರಕ್ತ ಪರೀಕ್ಷೆಯಲ್ಲಿ ನನ್ನ ಪ್ಲೇಟ್ಲೇಟ್ ಸಂಖ್ಯೆ ಕಡಿಮೆ ಇರುವುದಾಗಿ ರಕ್ಷಾ ಕ್ಲಿನಿಕ್ ಲ್ಯಾಬೋರೇಟರಿಯಲ್ಲಿ ನಡೆಸಿದ ರಕ್ತ ಪರೀಕ್ಷೆ ವರದಿಯಲ್ಲಿ ಬಂದಿದೆ. ಆದರೆ ಸಂಶಯಗೊಂಡ ನಾನು ಕೂಡಲೇ ಸ್ಥಳೀಯ ಎರಡು ಲ್ಯಾಬ್ನಲ್ಲಿ ಅದೇ ಪರೀಕ್ಷೆಯನ್ನು ಮಾಡಿಸಿದಾಗ ನನ್ನ ಪ್ಲೇಟ್ಲೇಟ್ ಸಂಖ್ಯೆ ಒಂದು ಲಕ್ಷಕ್ಕಿಂತ ಹೆಚ್ಚಿತ್ತು. ರಕ್ಷಾ ಕ್ಲಿನಿಕ್ ಲ್ಯಾಬೋರೇಟರಿಯಲ್ಲಿ ನನ್ನ ರಿಪೋರ್ಟ್ ಗೆ ಸೀಲ್ ಮತ್ತು ಸಹಿ ಹಾಕಲು ಹೇಳಿದಾಗ ನಿರಾಕರಿಸಿ, ನನ್ನೊಂದಿಗೆ ಉಡಾಫೆಯಿಂದ ವರ್ತಿಸಿದ್ದಾರೆ. ಈ ವಿಚಾರವನ್ನು ದೊಡ್ಡದು ಮಾಡುವ ಉದ್ದೇಶ ನನಗಿಲ್ಲ. ಆದರೆ ಇಂತಹ ಅನ್ಯಾಯ ಇನ್ಯಾರಿಗೂ
ಆಗಬಾರದು ಎನ್ನುವ ನಿಟ್ಟಿನಲ್ಲಿ ನಾನು ಪ್ರಶ್ನಿಸಿದ್ದೇನೆ. ಈಗಾಗಲೇ ಡಿ.ಹೆಚ್.ಒ. ಹಾಗೂ ಟಿ.ಹೆಚ್.ಒ.ರವರಿಗೆ ಮಾಹಿತಿ ನೀಡಿದ್ದು, ಅವರಿಗೆ ಹಾಗೂ ಮೇಲಾಧಿಕಾರಿಗಳಿಗೆ ದೂರು ನೀಡುತ್ತೇನೆ ಎಂದು ದೂರುದಾರ ಡಾ.ಶರತ್ ಶೆಟ್ಟಿ ತಿಳಿಸಿದ್ದಾರೆ.




